ಮಂಗಳೂರು: ಹೃದಯಾಘಾತದಿಂದ ಹೆಡ್ ಕಾನ್‌ಸ್ಟೇಬಲ್ ಮೃತ್ಯು

Update: 2023-10-03 15:28 GMT

ಮಂಗಳೂರು, ಅ.3: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್‌ಸ್ಪೆಕ್ಟರ್‌ರ ಚಾಲಕರಾಗಿದ್ದ ಸೋಮನಗೌಡ ಚೌಧರಿ (32) ಎಂಬವರು ಮಂಗಳವಾರ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

2016ರ ಬ್ಯಾಚ್‌ನವರಾದ ಸೋಮನಗೌಡ ಚೌಧರಿ ಮಂಗಳೂರು ಸಿಎಆರ್ ಕಾನ್‌ಸ್ಟೇಬಲ್ ಆಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಹೆಡ್‌ಕಾನ್‌ಸ್ಟೇಬಲ್ ಆಗಿ ಭಡ್ತಿ ಪಡೆದು ಇನ್‌ಸ್ಪೆಕ್ಟರ್‌ರ ಚಾಲಕನಾಗಿ ಕರ್ತವ್ಯದಲ್ಲಿದ್ದರು. ಮೂರು ವರ್ಷದ ಹಿಂದೆ ಅವರು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ನಗರದ ಶಾಪ್‌ವೊಂದಕ್ಕೆ ತೆರಳಿದ್ದರು. ಈ ವೇಳೆ ಹಠಾತ್ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಗಲೇ ನಿಧನರಾಗಿರುವ ಬಗ್ಗೆ ತಪಾಸಣೆ ನಡೆಸಿದ ವೈದ್ಯರು ಘೋಷಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಸೋಮನಗೌಡ ಅವರ ಮೃತದೇಹಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್, ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿ ಸಿಬ್ಬಂದಿ ವರ್ಗವು ಅಂತಿಮ ಗೌರವ ಸಲ್ಲಿಸಿ, ಕುಟುಂಬದವರಿಗೆ ಮೃತದೇಹ ಬಿಟ್ಟುಕೊಟ್ಟರು. ಬಳಿಕ ಸ್ವಂತ ಊರಾದ ವಿಜಯಪುರಕ್ಕೆ ಮೃತದೇಹವನ್ನು ಕಳುಹಿಸಿಕೊಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News