ಮಂಗಳೂರು: ಇರಿದು ಗಾಯಗೊಳಿಸಿದ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2023-11-04 16:45 GMT

ಮಂಗಳೂರು, ನ.4: ನಗರದ ಗೂಡ್ಸ್‌ಶೆಡ್ ಬಳಿ ಅಬ್ದುಲ್ ಅಝೀಝ್ ಎಂಬವರಿಗೆ ಬ್ಲೇಡ್‌ನಿಂದ ಇರಿದು ಗಾಯಗೊಳಿಸಿದ ಆರೋಪಿ ಮುಹಮ್ಮದ್ ಗೌಸ್ ಯಾನೆ ರವೂಫ್ ಯಾನೆ ಮುನ್ನ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. 2 ವರ್ಷಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

2014ರ ಮಾ.9ರಂದು ರಾತ್ರು ಸುಮಾರು 8.15ಕ್ಕೆ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಗೂಡ್ಸ್‌ಶೆಡ್ ಬಳಿ ಆರೋಪಿ ಮುಹಮ್ಮದ್ ಗೌಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಲ್ಲಿ ಹಣ ಕೇಳಿ ತೊಂದರೆ ಕೊಡುತ್ತಿದ್ದುದನ್ನು ನೋಡಿದ ಅಬ್ದುಲ್ ಅಝೀಝ್ ಆಕ್ಷೇಪಿಸಿದರು ಎನ್ನಲಾಗಿದೆ.

ಇದರಿಂದ ಕುಪಿತಗೊಂಡ ಮುಹಮ್ಮದ್ ಗೌಸ್ ಅವಾಚ್ಯ ಶಬ್ಧದಿಂದ ಬೈದು ತನ್ನ ಪ್ಯಾಂಟ್‌ನ ಕಿಸೆಯಲ್ಲಿದ್ದ ಹರಿತವಾದ ಬ್ಲೇಡ್‌ನಿಂದ ಅಝೀಝ್‌ರ ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಎಸ್ಸೈ ಶಿವರುದ್ರಪ್ಪ ಮೇಟಿ ಮತ್ತು ಅನಂತ ಮುರ್ಡೇಶ್ವರ್ ಈ ಬಗ್ಗೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಆರೋಪಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು 20,000 ರೂ. ದಂಡ, ಒಂದು ವೇಳೆ ದಂಡ ಪಾವತಿ ಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ನೀಡಿದ್ದಾರೆ. ವಸೂಲಾತಿಯಾಗುವ 20,000 ರೂ.ಪೈಕಿ 15,000 ರೂ.ವನ್ನು ಅಬ್ದುಲ್ ಅಝೀಝ್‌ಗೆ ಪರಿಹಾರವಾಗಿ ನೀಡಲು ಮತ್ತು ಉಳಿದ ಹಣವನ್ನು ಖರ್ಚಿನ ಬಾಬ್ತು ಸರಕಾರದ ಬೊಕ್ಕಸಕ್ಕೆ ಹೊಂದಾಣಿಕೆ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News