ಮಂಗಳೂರು: ವಾಹನಗಳ ಕಳವು ಪ್ರಕರಣ; ಆರೋಪಿ ಸೆರೆ
ಮಂಗಳೂರು: ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮದ ತಿಲಕನಗರ ಮತ್ತು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗ್ರೌಂಡ್ನಲ್ಲಿ ಈ ಹಿಂದೆ ನಡೆದ ವಾಹನ ಕಳವು ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಮ ಗ್ರಾಮದ ಕನಕೂರು ಸೈಟ್ ನಿವಾಸಿ ಹುಸೈನ್ ಜಾಹೀದ್ (24)ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕಳವು ಮಾಡಿದ ಎರಡು ಸ್ಕೂಟರ್ಗಳಲ್ಲದೆ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಈ ಮೂರು ವಾಹನಗಳ ಬೆಲೆ 68,000 ರೂ. ಎಂದು ಅಂದಾಜಿಸಲಾಗಿದೆ.
ಅ.22ರಂದು ಅಂಬ್ಲಮೊಗರು ಗ್ರಾಮದ ಐಸಮ್ಮ ಎಂಬವರ ಹೋಂಡಾ ಡೀಯೋ ಮತ್ತು ನ.16ರಂದು ದೇರಳಕಟ್ಟೆಯ ಗುಲಾಮ್ ಹುಸೇನ್ ಎಂಬವರ ಹೋಂಡಾ ಆಕ್ಟಿವಾ ವಾಹನ ಕಳವಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಬಾಲಕೃಷ್ಣ, ಎಸ್ಸೈಗಳಾದ ನಾಗರಾಜ್ ಎಸ್, ಪುನೀತ್ ಗಾಂವ್ಕರ್, ಅಶೋಕ್, ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆ.ಸಿ, ಸುರೇಶ್ ತಳವಾರ್ ಪಾಲ್ಗೊಂಡಿದ್ದರು.