ಮಂಗಳೂರು: ಈಜುಕೊಳದಲ್ಲಿ ಮುಳುಗಿ ಯುವಕ ಮೃತ್ಯು

Update: 2023-12-12 16:33 GMT

ಅಭಿಷೇಕ್ ಆನಂದ್

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜಾಡುತ್ತಿದ್ದ ಹರ್ಯಾಣ ಮೂಲದ ಅಭಿಷೇಕ್ ಆನಂದ್ (30) ಎಂಬ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿರುವುದಾಗಿ ವರದಿಯಾಗಿವೆ.

ಸಂಜೆ ಸುಮಾರು 4:45ರಿಂದ 5:30ರವರೆಗೆ ಈ ಈಜುಕೊಳದಲ್ಲಿ ಸಾರ್ವಜನಿಕರಿಗೆ ಈಜಲು ಪ್ರವೇಶವಿದೆ. 4:30ರ ವೇಳೆಗೆ ಅಭಿಷೇಕ್ ಟಿಕೆಟ್ ಪಡೆದುಕೊಂಡು 4:45ರ ವೇಳೆಗೆ ಈಜುಕೊಳಕ್ಕೆ ಇಳಿದಿದ್ದ. 5:05ಕ್ಕೆ ನೀರಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಈ ವೇಳೆ ಸುಮಾರು 30ಕ್ಕೂ ಅಧಿಕ ಮಂದಿ ಈಜಾಡುತ್ತಿದ್ದರೂ ಯಾರಿಗೂ ಅಭಿಷೇಕ್ ಮುಳುಗಿದ್ದು ಅರಿವಿಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.

ಹುಡುಗನೊಬ್ಬ ಈಜಾಡುತ್ತಾ ಹೋಗುತ್ತಿದ್ದಾಗ ನೀರಿನಡಿ ದೇಹವೊಂದು ಕಾಣಸಿಕ್ಕಿದ್ದು ತಕ್ಷಣ ಆತ ಲೈಫ್‌ಗಾರ್ಡ್‌ಗಳಿಗೆ ಮಾಹಿತಿ ನೀಡಿದ. ಈ ವೇಳೆ ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ರಾಜೇಂದ್ರ ಮತ್ತು ಪುಂಡಲೀಕ ಎಂಬ ಲೈಫ್‌ ಗಾರ್ಡ್‌ಗಳು ಈಜುಕೊಳಕ್ಕೆ ಹಾರಿ ಅಭಿಷೇಕ್‌ನನ್ನು ಮೇಲಕ್ಕೆತ್ತಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಈಜುಕೊಳದಲ್ಲಿ ಈಜಾಡಲು ಬಂದಿದ್ದ ಡಾ.ನರೇಂದ್ರ ನಾಯಕ್ ಮತ್ತು ಲೈಫ್‌ಗಾರ್ಡ್ ರಾಜೇಂದ್ರ ಅವರು ಅಭಿಷೇಕ್‌ನ ಬಾಯಿ ಮೂಲಕ ಕೃತಕ ಉಸಿರಾಟ ನೀಡಿದ್ದಾರೆ. ಆದರೆ ಅಭಿಷೇಕ್‌ನಿಂದ ಯಾವುದೇ ಸ್ಪಂದನೆ ಸಿಗದ ಕಾರಣ ತಕ್ಷಣ ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಅಭಿಷೇಕ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಸ್ಥಳ ತನಿಖೆ ನಡೆಸಿದ್ದಾರೆ. ಈಜುಕೊಳಕ್ಕೆ ಯುವಕ ಬಂದಿರುವುದು, ಈಜುಕೊಳಕ್ಕೆ ಇಳಿದು ಈಜಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಜುಕೊಳವನ್ನೇ ಕೇಂದ್ರೀಕರಿಸಿ 10ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News