ಮುಲ್ಕಿ | ಸ್ಕೂಟರ್- ಓಮ್ನಿ ಕಾರು ಮಧ್ಯೆ ಅಪಘಾತ: ಯುವಕನಿಗೆ ಗಾಯ

Update: 2024-07-29 06:22 GMT

ಮುಲ್ಕಿ: ದ್ವಿಚಕ್ರ ವಾಹನ ಮತ್ತು ಓಮ್ನಿ ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡ್ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಕೊಲ್ನಾಡ್ ನಿವಾಸಿ ಮನೀಶ್(22) ಎಂಬವರು ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮನೀಶ್ ಮಂಗಳೂರಿನ ಮಾಲ್ ವೊಂದರಲ್ಲಿರುವ ಮೊಬೈಲ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮನೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಕೊಲ್ನಾಡು ಬಸ್ ನಿಲ್ದಾಣದವರೆಗೆ ಬಂದು ಅಲ್ಲಿ ಸ್ಕೂಟರ್ ಅನ್ನು ಇಟ್ಟು ಬಸ್ ನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಸೋಮವಾರ ಬೆಳಗ್ಗೆಯೂ ಕೊಲ್ನಾಡು ಕಡೆಯಿಂದ ತನ್ನ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News