ಶಿವಮೊಗ್ಗದಲ್ಲಿ ಉ.ಪ್ರ. ಮಾದರಿ ಮಹಾ ಪಂಚಾಯ್ತಿ ಸಭೆ: ಶರಣ್ ಪಂಪ್‌ವೆಲ್

Update: 2023-10-06 13:16 GMT

ಮಂಗಳೂರು, ಅ.6: ಉತ್ತರ ಪ್ರದೇಶ ಮಾದರಿಯಲ್ಲಿ ಹಿಂದುಗಳ ರಕ್ಷಣೆಗೆ ಶಿವಮೊಗ್ಗದಲ್ಲಿ ಮಹಾ ಪಂಚಾಯ್ತಿಸಭೆ ನಡೆಸಲಾಗುವುದು ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹಿಂದುಗಳ ಮೇಲೆ ಆಕ್ರಮಣಗಳಾದಾಗ ರಕ್ಷಣೆ ಹಾಗೂ ಒಗ್ಗಟ್ಟು ಪ್ರದರ್ಶನಕ್ಕೆ ಮಹಾಪಂಚಾಯ್ತಿ ನಡೆಸಿ ಹಿಂದು ರಕ್ಷಣೆಗೆ ಪ್ರಮುಖ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದೇ ರೀತಿ ಶಿವಮೊಗ್ಗ ಘಟನೆ ಬಳಿಕ ಹಿಂದುಗಳ ರಕ್ಷಣೆ ಸಲುವಾಗಿ ಸಾಧು, ಸಂತರು, ಹಿಂದು ಸಮಾಜದ ಮುಖಂಡರು ಹಾಗೂ ಪ್ರಮುಖರನ್ನು ಕರೆದು ಮಹಾಪಂಚಾಯ್ತಿ ನಡೆಸಲಾಗುವುದು ಎಂದರು.

ಶಿವಮೊಗ್ಗ ಈದ್ ಮೆರವಣಿಗೆ ವೇಳೆ ಸಂಭವಿಸಿದ ಘಟನೆ ಪೂರ್ವಯೋಜಿತ ಕೃತ್ಯವಾಗಿದೆ. ಅದು ಹಿಂದು ಸಮಾಜವನ್ನು ಗುರಿಯಾಗಿಸಿ ನಡೆದ ಘಟನೆಯಾಗಿದ್ದು, ಈದ್ ಮೆರವಣಿಗೆ ಶನೀಶ್ವರ ದೇವಸ್ಥಾನ ಬಳಿ ಬರುತ್ತಿದ್ದಂತೆ ಮುಸ್ಲಿಂ ಮಹಿಳೆಯರು ಕಲ್ಲು ತೂರಾಟವಾಗಿದೆ ಎಂದು ಬೊಬ್ಬೆ ಹಾಕಿದ್ದಾರೆ. ಈ ಸುಳ್ಳಿನ ಕಾರಣದಿಂದ ಮೆರವಣಿಗೆಯಲ್ಲಿದ್ದವರು ಅಪ್ರಚೋದಿತರಾಗಿ 10-20 ಹಿಂದು ಮನೆಗಳಿಗೆ ನುಗ್ಗಿ ದಾಳಿ ನಡೆಸಿದ್ದಾರೆ. ಇದು ಇಸ್ಲಾಂ ದಂಗೆಕೋರರ ಕೃತ್ಯವಾಗಿದ್ದು, ಇದರಲ್ಲಿ ಅವರ ಮಹಿಳೆಯರೂ ಇರುವುದು ಗಂಭೀರ ವಿಚಾರವಾಗಿದೆ.

ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಬಳಿಕ ಈದ್ ಘಟನೆ ವರೆಗೆ ಹಿಂದುಗಳ ಮೇಲೆ ದಾಳಿ ನಡೆಯುತ್ತಿದೆ. ಹೀಗಾಗಿ ಪೊಲೀಸರು ಹಾಗೂ ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ತನಿಖೆ ವಹಿಸಿ ಘಟನೆಯ ಸತ್ಯಾಸತ್ಯತೆ ಬಯಲಿಗೆ ತರಬೇಕು ಎಂದು ಶರಣ್ ಪಂಪ್‌ವೆಲ್ ಹೇಳಿದರು.

ಅಸುರನಾಗಿರುವ ಮಹಿಷನ ಹೆಸರಿನಲ್ಲಿ ಕರಾವಳಿಯಲ್ಲಿ ಎಲ್ಲಿಯೂ ದಸರಾ ಆಚರಿಸುತ್ತಿಲ್ಲ. ಹಾಗಾಗಿ ಉಡುಪಿಯಲ್ಲಿ ಮಹಿಷ ದಸರಾ ಉತ್ಸವ ನಡೆಸಲು ಯಾವುದೇ ಕಾರಣಕ್ಕೂ ಹಿಂದು ಸಂಘಟನೆಗಳು ಅವಕಾಶ ನೀಡುವುದಿಲ್ಲ. ಒಂದು ವೇಳೆ ಮಹಿಷ ದಸರೆಗೆ ಮುಂದಾದರೆ ಅದನ್ನು ನಿಲ್ಲಿಸಿಯೇ ನಿಲ್ಲಿಸುತ್ತೇವೆ ಎಂದು ಶರಣ್ ಪಂಪ್‌ವೆಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News