ರಕ್ತದಾನ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ: ಶಾಂತಾರಾಮ ಶೆಟ್ಟಿ

Update: 2024-09-29 16:34 GMT

ಮಂಗಳೂರು, ಸೆ.29: ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ರಕ್ತದಾನ ಅತ್ಯಂತ ಪವಿತ್ರ ಕಾರ್ಯವಾಗಿದೆ. ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶವಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವಾಗಲಿ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

ಶ್ರೀ ರಾಘವೇಂದ್ರ ಮಿತ್ರ ಮಂಡಳಿ ನೆಲ್ಲಿಕಾಯಿ ಮಠ ಮತ್ತು ಬಜಿಲಕೇರಿ ಫ್ರೆಂಡ್ಸ್ ಬಜಿಲಕೇರಿ ಮಂಗಳೂರು ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಹಾಗೂ ಫಾದರ್ ಮುಲ್ಲರ್ ಕಾಲೇಜು ಹಾಗೂ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಗರದ ಸೆಂಟ್ರಲ್ ವಾರ್ಡ್‌ನ ಬಸ್ತಿ ಗಾರ್ಡನ್ ಶಾಲೆಯಲ್ಲಿ ರವಿವಾರ ನಡೆದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಈ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.

ಶಿಬಿರಕ್ಕೆ ಆಗಮಿಸಿದ ವೇದವ್ಯಾಸ್ ಕಾಮತ್ ಅವರು ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನದ ಮೂಲಕ ಜನತೆಗೆ ನೆರವಾಗುತ್ತಿರುವ ಶ್ರೀ ರಾಘವೇಂದ್ರ ಮಿತ್ರ ಮಂಡಳಿ ಮತ್ತು ಬಜಿಲಕೇರಿ ಫ್ರೆಂಡ್ಸ್ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಸ್ಥಳೀಯ ಕಾರ್ಪೋರೇಟರ್ ಪೂರ್ಣಿಮಾ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುನೈನಾ ಭಟ್ , ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಫಾದರ್ ಮುಲ್ಲರ್ ಆಸ್ಪತ್ರೆ ಆರೋಗ್ಯ ಶಿಬಿರದ ಸಂಯೋಜಕ ರೈನಾ, ಕೆಲ್ವಿನ್ ಪೀಟರ್ ಪಾಸ್, ರೆಡ್ ಕ್ರಾಸ್ ರಕ್ತನಿಧಿ ಸಂಯೋಜಕ ಪ್ರವೀಣ್ ಕುಮಾರ್, ಬಸ್ತಿ ಗಾರ್ಡನ್ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ರಾವ್, ಶ್ರೀರಾಘವೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಕಾಂತ ನಾಯಕ್, ಬಜಿಲಕೇರಿ ಫ್ರೆಂಡ್ಸ್ ಅಧ್ಯಕ್ಷ ಹರೀಶ್.ಎಚ್. ಉಪಸ್ಥಿತರಿದ್ದರು. ಅರ್ಪಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಫೋಟೋ : ಕ್ಯಾಂಪ್

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News