ಗುರುಪುರ| ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ: ಹೋರಾಟ ಸಮಿತಿ
ಗುರುಪುರ: ಪಲ್ಗುಣಿ ಸೇತುವೆ ಹೋರಾಟ ಸಮಿತಿ ಪೊಳಲಿ ಅಡ್ಡೂರು ಇದರ ವತಿಯಿಂದ ರವಿವಾರ ನಡೆದ ಸಮಾ ಲೋಚನ ಸಭೆಯ ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, ಬಂಟ್ವಾಳ ಶಾಸಕರು ಸೋಮವಾರ ಸೇತುವೆ ಬಳಿ ಹೋರಾಟ ಸಮಿತಿಯನ್ನು ಭೇಟಿಯಾಗಿ ಅಹವಾಲು ಆಲಿಸಿತು.
ಈ ವೇಳೆ ಶಾಸಕರು ಮತ್ತು ಜಿಲ್ಲಾಡಳಿತದಿಂದ ಬಂದಿದ್ದ ಅಧಿಕಾರಿಗಳ ತಂಡ ಪರ್ಯಾಯ ರಸ್ತೆಯನ್ನು ವೀಕ್ಷಣೆ ಮಾಡಿ ಅಂದಾಜು ವೆಚ್ಚ ಪಟ್ಟಿ ತಯಾರು ಮಾಡಲು ಶಾಸಕರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಈ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹೋರಾಟ ಸಮಿತಿಯ ಮುಖಂಡರೊಂದಿಗೆ ಚರ್ಚಿಸಿದರು. ಪರ್ಯಾಯ ರಸ್ತೆಯ ಸಂಪೂರ್ಣ ಜವಾಬ್ದಾರಿಯನ್ನು ತಾನು ವಹಿಸಿಕೊಂಡು ಶೀಘ್ರದಲ್ಲಿ ನಾಗರೀಕರ ಬೇಡಿಕೆಯಂತೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರ್ಯಾಯ ರಸ್ತೆಯನ್ನು ನಿರ್ಮಿಸಲು ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಮಂಗಳವಾರ ಸೇತುವೆ ಬಂದ್ ಮಾಡಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡುವುದಾಗಿ ಹೇಳಿದೆ. ಹೋರಾಟ ಸಮಿತಿ ಉಗ್ರ ಪ್ರತಿಭಟನೆಯ ಹಾದಿ ಹಿಡಿದ ಪರಿಣಾಮ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್, ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೋರಾಟ ಸಮಿತಿಯ ಮುಖಂಡರು ಇದ್ದರು.