ಕಟ್ಟಡ ಕಾರ್ಮಿಕರ ಪಿಂಚಣಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

Update: 2024-10-14 17:21 GMT

ಮೂಡುಬಿದಿರೆ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ 2024ರ ಆಗಸ್ಟ್- ಸಪ್ಟೆಂಬರ್ ತಿಂಗಳಿಂದ ಮಾಸಿಕ ಪಿಂಚಣಿ ಸಿಗುತ್ತಿಲ್ಲ. ಕೂಡಲೇ ಪಿಂಚಣಿ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ದ.ಕ ಜಿಲ್ಲಾ ಸಮಿತಿ ಸೋಮವಾರ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ವಸಂತ ಆಚಾರಿ ಅವರು, 1996ರ ಕೇಂದ್ರ ಮಟ್ಟದ ಕಾಯ್ದೆ ಮತ್ತು ಪೆಸ್ ಕಾಯ್ದೆಯನ್ನು ರಕ್ಷಿಸ ಬೇಕು. ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979ನ್ನು ಉಳಿಸಿ ಹಾಗೂ ಬಲಪಡಿಸಬೇಕು. ನಿರ್ಮಾಣ ಸಾಮಗ್ರಿಗಳು ಮತ್ತು ಸಲಕರಣೆಗಳ ಮೇಲಿನ ಜಿಎಸ್ ಟಿಯನ್ನು ಕಡಿಮೆ ಮಾಡಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ. ಈ ಕೂಡಲೇ ಅದನ್ನು ಪಾವತಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ತಿರಸ್ಥರಿಸಬಾರದು. ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇಮಾರಿ ಮಾಡಬೇಕು ಎಂದು ಆಗ್ರಹಿಸಿದರು.

ಟೆಂಡರ್ ಆಧಾರಿತ ಎಲ್ಲಾ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಶಿಟ್ ಹಾಗೂ ಇತರೆ ಖರೀದಿಗಳಲ್ಲಿ ಅವ್ಯವಹಾರಗಳು ನಡೆದಿದ್ದು ಈ ಬಗೆ ನ್ಯಾಯಾಂಗ ತನಿಖೆಯಾಗಬೇಕು. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆಗಳನ್ನು ಪರಿಹರಿಸಬೇಕು. ಕಲ್ಯಾಣ ಮಂಡಳಿಯನ್ನು ಮತ್ತು ಸಲಹಾ ಮಂಡಳಿಯನ್ನು ಪುನರ್ ರಚಿಸಿ ಕೇಂದ್ರ ಕಾರ್ಮಿಕರ ಸಂಘಗಳಿಗೆ ಪ್ರಾತಿನಿಧ್ಯ ನೀಡಬೇಕು. ಪಿಂಚಾಣಿದಾರರ ಅರ್ಜಿ ಸಲ್ಲಿಸಲು ಇರುವ ಪ್ರಾಯದ ದಿನಾಂಕದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು.

ಪೆಡರೇಶನ್ ತಾಲೂಕು ಕಾರ್ಯದರ್ಶಿ ಶಂಕರ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಇದೇ ಸಂದರ್ಭ ತಹಶೀಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ನೀಡಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಮುಂದಾಳುಗಳಾದ ಕೃಷ್ಣಪ್ಪ ಬಿರಾವು, ಸೀತಾರಾಮ ಶೆಟ್ಟಿ, ಸಂಜೀವ ಪೂಜಾರಿ, ಜಯಾನಂದ ಪೂಜಾರಿ, ದಿವಾಕರ ನಿಡ್ಡೋಡಿ, ಸುಂದರ ನಿಡ್ಡೋಡಿ, ಶ್ರೀಧರ ಆಚಾರಿ, ಪಾಂಡು ಪೂಜಾರಿ ಸದಾನಂದ ಮಾರ್ನಾಡು ವಹಿಸಿದ್ದರು. ರಾಧಾ ಸ್ವಾಗತಿಸಿದರು. ಕೃಷ್ಣಪ್ಪ ನಡಿಗುಡ್ಡೆ ಧನ್ಯವಾದಗೈದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News