ಹಾಸ್ಯದಲ್ಲಿ ಹೊಸತನ ತರಲು ಪ್ರಯತ್ನ: ಅರವಿಂದ ಬೋಳಾರ್

Update: 2024-10-23 13:39 GMT

ಮಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ನಾಟಕಗಳಲ್ಲಿ ಹಾಸ್ಯ ಪಾತ್ರ ಮಾಡುತ್ತಿದ್ದೆ. ಬಳಿಕ ಹಾಸ್ಯ ಪಾತ್ರ ನನ್ನ ಜೀವನ ದಲ್ಲಿ ಹಾಸುಹೊಕ್ಕಾಯಿತು. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಅದನ್ನು ವೃತ್ತಿ ಜೀವನ ದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನ ತರಲು ಪ್ರಯತ್ನಿಸುತ್ತೇನೆ ಎಂದು ಖ್ಯಾತ ಚಿತ್ರ ನಟ, ಅರವಿಂದ ಬೋಳಾರ್ ಹೇಳಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಅವರು ಪತ್ರಕರ್ತರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಲಾವಿದನಲ್ಲಿ ಸಮಾಜ ಪ್ರಜ್ಞೆ , ಹಾಸ್ಯ ಪ್ರಜ್ಞೆ ಅಗತ್ಯ. ತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರು ಕೂಡಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತುಳು ನಾಟಕಗಳು ತೋರಿಸಿಕೊಟ್ಟಿವೆ ಎಂದರು.

ಹುಚ್ಚನ ಪಾತ್ರದ ಯಶಸ್ಸು: ಶಾಲೆಯಲ್ಲಿ ಶಿಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಏನನ್ನು ಉತ್ತರ ಕೊಡದೆ ಇದ್ದಾಗ ನಿನೇನು ಹುಚ್ಚನೇ ಎಂದು ಬೈದರು. ಆದರೆ ನಾನು ಅದೇ ದಿನ ಶಾಲೆಯಲ್ಲಿ ಹುಚ್ಚನ ವೇಷ ಹಾಕಿ ಪ್ರಥಮ ಬಹುಮಾನ ಗಿಟ್ಟಿಸಿ ಕೊಂಡೆ. ಅಂದಿನ ಯಶಸ್ಸು ಮುಂದೆ ನನ್ನನ್ನು ಪ್ರಭುದ್ಧ ಕಲಾವಿದನಾಗಿ ರೂಪಿಸಿತು ಎಂದರು.

ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ರಂಗಭೂಮಿ ಕಲಾವಿದನಿಗೆ ತನ್ನ ವೃತ್ತಿಯಲ್ಲಿ ನಿಷ್ಠೆ,ಭಯ, ಭಕ್ತಿ ಇದ್ದರೆ ಜೀವನ ನಿರ್ವಹಣೆಗೆ ಯಾವುದೇ ಕೊರತೆ ಉಂಟಾಗದು ಶಾರದಾ ಮಾತೆ ನನಗೆ ಚಿಕ್ಕಂದಿನಲ್ಲಿ ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಶಿಕ್ಷಣ ಪಡೆಯಲು ವಾತಾವರಣ ಇರಲಿಲ್ಲ. ಹೆತ್ತವರು ಶಿಕ್ಷಣ ಕೊಡಿಸಲು ಅಸಮರ್ಥರಾದರು. ಆದರೆ ಶಾರದಾ ಮಾತೆ ನನ್ನ ಕೈ ಬಿಡಲಿಲ್ಲ.. ರಂಗಭೂಮಿಯ ಮೇಲಿನ ಆಸಕ್ತಿ, ಗುರು, ಹಿರಿಯರ, ಪ್ರೇಕ್ಷಕರ ಆಶೀರ್ವಾದ ನನ್ನನ್ನು ಎತ್ತರಕ್ಕೆ ಬೆಳೆಸಿತು. ಯಕ್ಷಗಾನ, ಟಿ.ವಿ.ಕಾರ್ಯಕ್ರಮಗಳಲ್ಲೂ ಬೇಡಿಕೆಯ ನಟನಾದೆ. ಇದು ನನ್ನ ಭಾಗ್ಯ ಎಂದು ನುಡಿದರು.

ರಂಗಭೂಮಿ ನನಗೆ ಎಲ್ಲವನ್ನೂ ನೀಡಿದೆ. ಅನ್ನದ ದಾರಿ, ಹಣ,ಉತ್ತಮ ಹೆಸರು, ಸ್ವಂತ ಮನೆ, ಮಕ್ಕಳಿಗೆ ಶಿಕ್ಷಣ, ಮಗಳ ಅದ್ದೂರಿ ಮದುವೆ ಎಲ್ಲವೂ ರಂಗಭೂಮಿಯಿಂದ ಸಾಧ್ಯವಾಗಿದೆ ಎಂದರು.

ದೇವದಾಸ್ ಕಾಪಿಕಾಡ್ ಅವರ ತಂಡಕ್ಕೆ ಸೇರ್ಪಡೆಯಾದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದೆ. ವಿಜಯಕುಮಾರ್ ಕೊಡಿ ಯಾಲ್‌ಬೈಲ್ ಅವರಿಂದ ತುಳು ಸಿನಿಮಾ ಪ್ರವೇಶಿಸಿ ಅಲ್ಲಿಯೂ ಒಳ್ಳೆಯ ಅವಕಾಶ ಪಡೆದೆ . ಹೊಟ್ಟೆಪಾಡಿಗೆ ಹಲವು ಕೆಲಸ ಮಾಡಿದೆ ಎಂದರು.

 ಕಾರ್ಯಕ್ರಮ ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ರಂಗಭೂಮಿ ಕಟ್ಟಲು ಅನೇಕರ ತ್ಯಾಗ, ಪರಿಶ್ರಮ ಇದೆ. ತುಳು ರಂಗಭೂಮಿ ತುಳು ಭಾಷೆಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡಿದೆ.ತುಳು ರಂಗ ಭೂಮಿಗೆ ಅರವಿಂದ ಬೋಳಾರ್ ಅವರ ಕೊಡುಗೆ ಅನನ್ಯ ಎಂದರು.

ನ.6 ಅರವಿಂದ ಬೋಳಾರ್ ವಿದೇಶಕ್ಕೆ

ಅರವಿಂದ ಬೋಳಾರ್ ಅವರು ನ.6ರಿಂದ ಆಸ್ಟ್ರೇಲಿಯಾ, ಡಿ.5ರಿಂದ ನೈಜೀರಿಯಾದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕಾ ಇಂಗ್ಲೆಂಡ್ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ಸಂಘಟಕರು ಮಾತುಕತೆ ನಡೆಸಿದ್ದಾರೆ ಎಂದು ಅರವಿಂದ ಬೋಳಾರ್ ಮಾಹಿತಿ ನೀಡಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಸಂಯೋಜಕ ಸತೀಶ್ ಇರಾ ಉಪಸ್ಥಿತರಿದ್ದರು.

ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಉಪಾಧ್ಯಕ್ಷ ಮುಹಮ್ಮದ್ ಆರಿಫ್ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News