ಮಂಗಳೂರು: ಸರಕಾರಿ ಮರದ ದಿಮ್ಮಿ ಅಕ್ರಮ ಸಾಗಾಟದ ಆರೋಪ

Update: 2024-10-23 13:57 GMT

ಮಂಗಳೂರು: ನಗರದ ಕದ್ರಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿರುವ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಲೋಕೋಪಯೋಗಿ ಇಲಾಖೆಯದ ಅಧೀನದಲ್ಲಿದ್ದ ಎರಡು ಮರಗಳ ರೆಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನು ಮತಿ ಪಡೆಯಲಾಗಿತ್ತು ಎನ್ನಲಾಗಿದೆ. ಆದರೆ ದೇವದಾರ್ ಮತ್ತು ಸಾಗುವಾನಿ ಸಹಿತ 8 ಮರಗಳಿಗೆ ಕೊಡಲಿಯೇಟು ಹಾಕಿದ್ದಲ್ಲದೆ ಮರದ ದಿಮ್ಮಿಗಳನ್ನು ಖಾಸಗಿ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಅರಣ್ಯ ಜಾಗೃತಿ ದಳಕ್ಕೆ ಮಾಹಿತಿ ನೀಡಿದರು. ಅಲ್ಲದೆ ಪಂಪ್‌ವೆಲ್ ಬಳಿ ಖಾಸಗಿ ವಾಹನಕ್ಕೆ ತಡೆಯಲು ಪ್ರಯತ್ನಿಸಿದರು. ಅಪಾಯದ ಮುನ್ಸೂಚನೆ ಅರಿತುಕೊಂಡ ಚಾಲಕ ಹೊಗೆ ಬಜಾರ್‌ನ ಡಿಪೋ ಆವರಣದಲ್ಲಿ ವಾಹನ ನಿಲ್ಲಿಸಿದ ಎನ್ನಲಾಗಿದೆ.

ಅಪಾಯಕಾರಿಯಾದ ಎರಡು ಮರದ ರೆಂಬೆಗಳನ್ನು ಮಾತ್ರ ಕಡಿಯಲು ಅನುಮತಿ ಕೇಳಿದವರು ಬಳಿಕ 8 ಮರಗಳನ್ನು ಉರುಳಿಸಿದರು. ಅಷ್ಟೇ ಅಲ್ಲ ಮರದ ದಿಮ್ಮಿಗಳನ್ನು ವಾಹನದಲ್ಲಿಟ್ಟು ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿ ರಾತ್ರಿ ವೇಳೆ ಸಾಗಾಟ ಮಾಡುವ ಅಗತ್ಯ ಏನಿತ್ತು? ಅಕ್ರಮವಾಗಿ ಯಾಕೆ ಸಾಗಾಟ ಮಾಡಬೇಕು? ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು? ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News