ಕಾಸರಗೋಡು: ಮನೆ ಮುಂದೆ ಪಟಾಕಿ ಸಿಡಿಸಿದಕ್ಕೆ ವಾಗ್ವಾದ; ನಾಲ್ಕು ಮಂದಿಗೆ ಚೂರಿ ಇರಿತ

ಕಾಸರಗೋಡು: ಮನೆ ಮುಂದೆ ಪಟಾಕಿ ಸಿಡಿಸಿದ ಬಗ್ಗೆ ಉಂಟಾದ ವಾಗ್ವಾದ ಘರ್ಷಣೆಗೆ ಕಾರಣವಾದ ಘಟನೆ ರವಿವಾರ ರಾತ್ರಿ ವಿದ್ಯಾನಗರ ಸಮೀಪದ ನಾಲ್ಕನೇ ಮೈಲ್ ನ ಸಿಟಿಝನ್ ನಗರದಲ್ಲಿ ನಡೆದಿದೆ. ಈ ವೇಳೆ ನಾಲ್ಕು ಮಂದಿ ಇರಿತದಿಂದ ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧ ಪಟ್ಟಂತೆ ಆಲಂಪಾಡಿ ಎರ್ಮಾಳಂತೆ ಮೊಯ್ದೀನ್ (68), ಅಬ್ದುಲ್ ರೆಹಮಾನ್ ಮಿಡ್ ಲಾಜ್ (24), ಮತ್ತು ಮುಹಮ್ಮದ್ ಅಝರುದ್ದೀನ್ (29) ಎಂಬವರನ್ನು ಬಂಧಿಸಲಾಗಿದೆ.
ಸಿಟಿಝನ್ ನಗರದ ಇಬ್ರಾಹಿಂ ಝೈನುದ್ದೀನ್ (62) ಅವರ ಪುತ್ರ ಫವಾಝ್ (20), ಸಂಬಂಧಿಕರಾದ ತೈವಳಪ್ಪುವಿನ ರಝಾಕ್ (50) ಮತ್ತು ಮುನ್ಷಿದ್ (28) ಇರಿತಕ್ಕೊಳಗಾಗಿದ್ದಾರೆ. ಇವರಲ್ಲಿ ಫವಾಝ್ ರನ್ನು ಮಂಗಳೂರಿನ ಆಸ್ಪತ್ರೆಗೆ ಮತ್ತು ಉಳಿದವರನ್ನು ಚೆಂಗಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಯತ್ನ ಸೇರಿದಂತೆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.