ಸರ್ವ ಆರೋಗ್ಯ ಕಾಪಾಡಬಲ್ಲ ವೈದ್ಯಕೀಯ ವ್ಯವಸ್ಥೆಯ ಅಗತ್ಯವಿದೆ : ಡಾ.ಎಂ.ಮೋಹನ ಆಳ್ವ

Update: 2023-08-15 17:25 GMT

ಮೂಡುಬಿದಿರೆ: ‘ಅಹಿಂಸೆ ಮೂಲಕ ಸರ್ವಜನರ ಒಗ್ಗೂಡಿಸಿದ, ಮನೋಶಕ್ತಿಯಿಂದ ಸ್ವಾತಂತ್ರ್ಯ ಪಡೆದ ದೇಶ ನಮ್ಮದು. ‘ಸುಸ್ಥಿರ, ಸಾಮರಸ್ಯ, ಸಮಾನತೆ, ಸರ್ವ ಜೀವಿಗಳ ನೆಲೆಯ ಭಾರತ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಬೇಕು. ಭಾಷಾ ವೈವಿಧ್ಯತೆ, ಕಲೆ, ಕೌಶಲ, ಶ್ರಮಿಕರು, ಕೃಷಿಕರಿಗೆ ಆಶ್ರಯವಾಗುವ ಸಂಸ್ಥೆಗಳನ್ನು ರೂಪಿಸಬೇಕು. ಸರ್ವರ ಆರೋಗ್ಯ ಕಾಪಾಡಬಲ್ಲ ವೈದ್ಯಕೀಯ ವ್ಯವಸ್ಥೆ ಬೇಕಾಗಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಆಶಯ ವ್ಯಕ್ತಪಡಿಸಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ 77 ನೇ ಸ್ವಾತಂತ್ರ‍್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು.

ಅಂಚೆ, ರೈಲ್ವೆ, ತಂತ್ರಜ್ಞಾನಗಳ ಬೃಹತ್ ಜಾಲಗಳು, ಕಲ್ಲಿದ್ದಲು, ವಿದ್ಯುತ್, ಧಾನ್ಯ, ಸೆಣಬು, ಗೋಧಿ, ಅಕ್ಕಿ, ಸಕ್ಕರೆ, ಸಾಂಬಾರು, ಹಾಲು, ಮತ್ಸ್ಯ ಜವಳಿ ಉತ್ಪಾದನೆಗಳು, ಗುಡಿ ಕೈಗಾರಿಕೆ, ಶಿಲ್ಪಕಲೆ ಸೇರಿದಂತೆ ದೇಶವು ಹಲವು ಬಗೆಗಳಲ್ಲಿ ಮುಂಚೂಣಿಯಲ್ಲಿದೆ. ಜನಸಂಖ್ಯೆ, ಯುವಶಕ್ತಿಯಲ್ಲೂ ನಾವೇ ಮುಂದಿದ್ದೇವೆ. ‘ಆದರೆ, ತಿದ್ದಿಕೊಳ್ಳುವ, ಪರಿಷ್ಕರಿಸಿಕೊಳ್ಳುವ, ಆವಿಷ್ಕರಿಸುವ ಸಾಧನೆಗಳು ನಮ್ಮ ಮುಂದೆ ಸಾಕಷ್ಟಿವೆ. ಸಂತೋಷ ಭರಿತ, ಸಮೃದ್ಧ, ಸದೃಢ, ಸಂಪತ್ಭರಿತ ದೇಶವನ್ನು ನಾವೆಲ್ಲ ನಿರ್ಮಿಸಬೇಕಾಗಿದೆ’ ಎಂದು ನೆನಪಿಸಿದರು.

‘ಧರ್ಮ, ಮತ, ಜಾತಿ, ಭಾಷೆಗಳ ನಡುವೆ ಸಾಮರಸ್ಯ ನಿರ್ಮಿಸಿ, ವೈರುತ್ಯ, ವೈಮನಸ್ಸು, ಅಸಮಾನತೆಗಳನ್ನು ಹೋಗಲಾಡಿಸಬೇಕು. ಏಕತೆ, ಸಂಪತ್ತಿನ ಸಮಾನ ಹಂಚಿಕೆ, ಲಿಂಗ ತಾರತಮ್ಯ ರಹಿತ, ಕ್ರೌರ್ಯ- ಬಹಿಷ್ಕಾರಗಳಿಲ್ಲದ ಸಮುದಾಯ ರೂಪಿಸಬೇಕು. ಪಾರದರ್ಶಕ ಆಡಳಿತದ ಹೊಣೆಗಾರಿಕೆ ನಮ್ಮ ಮುಂದಿದೆ’ ಎಂದು ವಿವರಿಸಿದರು.

ಹೊರದೇಶದಲ್ಲಿ ಯುವಶಕ್ತಿ ಅವಶ್ಯವಾಗಿದೆ. ನಮ್ಮ ದೇಶದ ಯುವಶಕ್ತಿಯ ಮೇಲೆ ಇತರ ದೇಶಗಳ ಕಣ್ಣಿದೆ. ಅದಕ್ಕಾಗಿಯ ವಿದ್ಯಾಭ್ಯಾಸ, ಉದ್ಯೋಗ, ಐಷಾರಾಮಿ ಜೀವನದ ಮೂಲಕ ಗಿಲೀಟಿನ ಆಮಿಷ ನೀಡಿ ಸೆಳೆಯುತ್ತಿದ್ದಾರೆ. ಅದಕ್ಕೆ ಮರುಳಾಗಬೇಡಿ’ ಎಂದರು.

ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ, ಆಡಳಿತ ಮಂಡಳಿಯ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಹಾಗೂ ಇನ್ನಿತರ ಗಣ್ಯರು ಇದ್ದರು.

ಮಾಜಿ ಸೈನಿಕರು, ವಿವಿಧ ಕ್ಷೇತ್ರದ ಸಾಧಕರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಗಳು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ಹಾಗೂ ಪದವಿ ಪೂರ್ವ ಕಾಲೇಜು ಸೇರಿದಂತೆ 10ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಭ್ರಮದಲ್ಲಿ ಪಾಲ್ಗೊಂಡರು.

ಆಳ್ವಾಸ್ ಸಾಂಸ್ಕೃತಿಕ ತಂಡದ ಸದಸ್ಯರು ‘ಕೋಟಿ ಕಂಠೋನ್ಸೆ” ‘ವಂದೇ ಮಾತರಂ’, ‘ಜನ ಗಣ ಮನ’ವನ್ನು ಸುಶ್ರಾವ್ಯವಾಗಿ ಹಾಡಿದರು. ಉಪನ್ಯಾಸಕ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ.ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಪರೇಡ್ ಕಮಾಂಡರ್ ಆಗಿ ಎನ್‌ಸಿಸಿ ಅಂಡರ್ ಆಫೀಸರ್ ಪುಷ್ಯ ಪೊನ್ನಮ್ಮ ಹಾಗೂ ಗೌರವ ವಂದನೆಯನ್ನು ಅಂಡರ್ ಆಫೀಸರ್‌ಗಳಾದ ವಿಕಾಸ್ ಗೌಡ ಮತ್ತು ಅಬ್ರಹಾರ್ ನೆರವೇರಿಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News