ಪತ್ರಕರ್ತೆಯ ಜೊತೆ ಅನುಚಿತ ವರ್ತನೆ ಆರೋಪ: ನಟ ಸುರೇಶ್‌ ಗೋಪಿಗೆ ನಿರೀಕ್ಷಣಾ ಜಾಮೀನು

Update: 2024-01-08 15:57 GMT

ಸುರೇಶ್‌ ಗೋಪಿ | Photo: X

ಕೊಚ್ಚಿ: ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆಯ ಆರೋಪವನ್ನು ಎದುರಿಸುತ್ತಿರುವ ಮಲಯಾಳಂ ನಟ ಹಾಗೂ ಬಿಜೆಪಿ ನಾಯಕ ಸುರೇಶ್‌ ಗೋಪಿ ಅವರಿಗೆ ಕೇರಳ ಉಚ್ಛ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.

ಪೋಲಿಸರು ತನ್ನ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರಿಂದ ಸುರೇಶ್‌ ಗೋಪಿ ನಿರೀಕ್ಷಣಾ ಜಾಮೀನು ಕೋರಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈ ವಿಷಯದಲ್ಲಿ ಸರಕಾರದ ನಿಲುವನ್ನು ಕೋರಿದ್ದು, ಪ್ರಕರಣದಲ್ಲಿ ಸುರೇಶ್‌ ಗೋಪಿಯವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ಅದು ತಿಳಿಸಿತ್ತು.

ಪತ್ರಕರ್ತೆಯ ದೂರಿನ ಮೇರೆಗೆ ಕೋಝಿಕ್ಕೋಡ್ ನಡಕ್ಕಾವು ಪೋಲಿಸರು ಸುರೇಶ್‌ ಗೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಸುರೇಶ್‌ ಗೋಪಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಪತ್ರಕರ್ತೆ ದೂರಿನಲ್ಲಿ ಆರೋಪಿಸಿದ್ದರು. ಐಪಿಸಿಯ ಕಲಂ 354ರಡಿ ಆರೋಪವನ್ನು ಹೊರಿಸಿದ್ದ ಪೋಲಿಸರು ಸುರೇಶ್‌ ಗೋಪಿ ಅವರ ವಿಚಾರಣೆಯನ್ನು ನಡೆಸಿದ್ದರು.

ಘಟನೆಯು ಕಳೆದ ವರ್ಷದ ಅ.27ರಂದು ಇಲ್ಲಿಯ ಖಾಸಗಿ ಹೋಟೆಲ್ನಲ್ಲಿ ನಡೆದಿತ್ತು ಎನ್ನಲಾಗಿದೆ. ತನ್ನ ಇತ್ತೀಚಿನ ಚಿತ್ರದ ಬಿಡುಗಡೆಗಾಗಿ ಕಾರ್ಯಕ್ರಮವೊಂದರ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸುರೇಶ್‌ ಗೋಪಿ ಪತ್ರಕರ್ತೆಯ ಭುಜವನ್ನು ಸ್ಪರ್ಶಿಸಿದ್ದರು ಎಂದು ವರದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News