ಅಸ್ಸಾಂ: ಬಿಜೆಪಿ ಕಚೇರಿಯ ವಿಐಪಿ ಕೊಠಡಿಯಲ್ಲಿ ಬೆತ್ತಲೆ ಮೃತದೇಹ ಪತ್ತೆ!
ಗುವಾಹಟಿ: ಅಸ್ಸಾಂನ ಕ್ಯಾಚಾರ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಯ ಬೆತ್ತಲೆ ಮೃತದೇಹ ಪತ್ತೆಯಾಗಿದೆ ಎಂದು indiatodayne.in ವರದಿ ಮಾಡಿದೆ. ಕಚೇರಿಯ ವಿಐಪಿ ಕೊಠಡಿಯಿಂದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ಕಾರ್ಯಕರ್ತರು ಕಚೇರಿಯ ವಿಐಪಿ ಕೊಠಡಿಗೆ ಪ್ರವೇಶಿಸಿದ ನಂತರ ಮೃತದೇಹ ಪತ್ತೆಯಾಗಿದೆ. ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಬಿಮಲೇಂದು ರಾಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SMCH) ಕಳುಹಿಸಿದ್ದು, ಸದ್ಯ, ಮೃತದೇಹವನ್ನು ಶವಾಗಾರ ಕೋಣೆಯಲ್ಲಿ ಇರಿಸಲಾಗಿದೆ.
ʼಮೃತದೇಹ ಸುಧಾಂಶು ದಾಸ್ ಎಂಬ ವ್ಯಕ್ತಿಯದ್ದು. ಸುಧಾಂಶು ದಾಸ್ ಬಿಜೆಪಿ ಕಚೇರಿಯ ಕಾವಲುಗಾರ ನಂಟು ರಾಯ್ ಜೊತೆ ಆಗಾಗ ಬಿಜೆಪಿ ಕಚೇರಿಯಲ್ಲಿಯೇ ತಂಗುತ್ತಿದ್ದರು. ಅವರು ಕಚೇರಿಯ ಸಿಬ್ಬಂದಿ ಅಲ್ಲ. ಸುಧಾಂಶು ದಾಸ್ ಕೋಣೆಯ ಬಾಗಿಲು ತೆರೆಯುತ್ತಿಲ್ಲ ಎಂದು ವಾಚ್ಮ್ಯಾನ್ ನಂಟು ರಾಯ್ ನನಗೆ ತಿಳಿಸಿದ್ದರು. ಇದರ ನಂತರ ನಾನು ಪೊಲೀಸರಿಗೆ ಮಾಹಿತಿ ನೀಡಿ ಕಚೇರಿಯನ್ನು ತಲುಪಿದೆ" ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿಮಲೇಂದು ರಾಯ್ ತಿಳಿಸಿದ್ದಾರೆ.
"ಪೊಲೀಸರು ನಂತರ ವಿಐಪಿ ಕೊಠಡಿಯ ಬಾಗಿಲು ಮುರಿದು ಸುಧಾಂಶುವಿನ ಬೆತ್ತಲೆ ದೇಹವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.