ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ನಿಂದ ಬೆದರಿಕೆ | ಝಡ್ ಶ್ರೇಣಿ ಭದ್ರತೆಗೆ ಪಪ್ಪು ಯಾದವ್ ಆಗ್ರಹ

Update: 2024-10-28 15:43 GMT

ಪಪ್ಪು ಯಾದವ್ | PC ; X  

ಪಾಟ್ನಾ : ಲಾರೆನ್ಸ್ ಬಿಷ್ಣೋಯಿ ತಂಡದಿಂದ ಬೆದರಿಕೆಗೆ ಒಳಗಾದ ಬಳಿಕ ಬಿಹಾರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಆಲಿಯಾಸ್ ಪಪ್ಪು ಯಾದವ್ ಸೋಮವಾರ ‘ಝಡ್’ ಶ್ರೇಣಿಯ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.

ಪಪ್ಪು ಯಾದವ್ ಬಿಹಾರದ ಡಿಜಿಪಿ ಅಲೋಕ್ ರಾಜ್ ಅವರಿಗೆ ಕರೆ ಮಾಡಿದ್ದಾರೆ ಹಾಗೂ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯ ತನ್ನನ್ನು ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿದ ಕರೆಯ ರೆಕಾರ್ಡಿಂಗ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

ತಾನು ಅನಾಮಿಕ ವ್ಯಕ್ತಿಯೋರ್ವನಿಂದ ಮೊಬೈಲ್ ಕರೆ ಸ್ವೀಕರಿಸಿದೆ. ಅವಕಾಶ ನೀಡಿದರೆ ಲಾರೆನ್ಸ್ ಬಿಷ್ಣೋಯಿ ತಂಡವನ್ನು ನಾಶಪಡಿಸುತ್ತೇನೆ ಎಂದು ತಾನು ಘೋಷಿಸಿದ ಬಳಿಕ ತನ್ನ ಚಟುವಟಿಕೆಗಳನ್ನು ಲಾರೆನ್ಸ್ ಬಿಷ್ಣೋಯಿ ತಂಡ ನಿಕಟವಾಗಿ ಗಮನಿಸುತ್ತಿದೆ ಎಂದು ಕರೆ ಮಾಡಿದ ಅನಾಮಿಕ ವ್ಯಕ್ತಿ ಹೇಳಿದ್ದಾನೆ ಎಂದು ಪಪ್ಪು ಯಾದವ್ ತಿಳಿಸಿದ್ದಾರೆ.

ಪ್ರಸಕ್ತ ಸಬರ್ಮತಿ ಜೈಲಿನಲ್ಲಿರುವ ತಂಡದ ಮುಖ್ಯಸ್ಥ ಲಾರೆನ್ಸ್ ಬಿಷ್ಣೋಯಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜೈಲಿನಲ್ಲಿ ಜಾಮರ್ ಅಳವಡಿಸಿರುವುದರಿಂದ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ತಂಡ ನಿಮ್ಮನ್ನು ಹತ್ಯೆಗೈಯುವ ಉದ್ದೇಶದಿಂದ ಹಲವು ಸ್ಥಳಗಳ ಪರಿಶೀಲನೆ ನಡೆಸಿದೆ ಎಂದು ಕರೆ ಮಾಡಿದ ಅನಾಮಿಕ ವ್ಯಕ್ತಿ ಹೇಳಿದ್ದಾನೆ ಎಂದು ಪಪ್ಪು ಯಾದವ್ ತಿಳಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News