ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳು ಒಟ್ಟಾಗಿ ಸ್ಪರ್ಧೆ

Update: 2024-06-30 17:37 GMT

Photo : indiatimes

ಮುಂಬೆ : ಈ ವರ್ಷ ಅಕ್ಟೋಬರ್ ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಹಾಗೂ ತಮ್ಮ ಪಕ್ಷ ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರು ರವಿವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಭಾಗವಾಗಿದ್ದ ಸಣ್ಣ ಮಿತ್ರ ಪಕ್ಷಗಳ ಹಿತಾಸಾಕ್ತಿಯನ್ನು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ರಕ್ಷಿಸುವುದು ಮಹಾರಾಷ್ಟ್ರದಲ್ಲಿ ಪ್ರಮುಖ ಪ್ರತಿಪಕ್ಷಗಳ ನೈತಿಕ ಜವಾಬ್ದಾರಿ ಎಂದರು.

ರಾಜ್ಯದಲ್ಲಿ ಬದಲಾವಣೆಯ ಅಗತ್ಯವಿದ್ದು, ಅದನ್ನು ನಿರ್ವಹಿಸುವುದು ಪ್ರತಿಪಕ್ಷಗಳ ಒಕ್ಕೂಟದ ಹೊಣೆಯಾಗಿದೆ. ಅರ್ಜುನ (ಮಹಾಭಾರತ)ನ ಗುರಿ ಮೀನಿನ ಕಣ್ಣಿನ (ಮೀನಿನ) ಮೇಲೆ ಹೇಗಿತ್ತೋ ಅದೇ ರೀತಿ ನಮ್ಮ ಗುರಿ ಮಹಾರಾಷ್ಟ್ರ ಚುನಾವಣೆ ಮೇಲಿರಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸ್ಥಾನ ಹಂಚಿಕೆ ಕುರಿತು ಮಾತುಕತೆ ಆರಂಭವಾಗಿಲ್ಲ. ಅದು ಶೀಘ್ರದಲ್ಲಿ ಆರಂಭವಾಗಲಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಜನರು ಎನ್ಸಿಪಿ (ಎಸ್ಪಿ), ಶಿವಸೇನೆ (ಯುಬಿಟಿ) ಹಾಗೂ ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಶರದ್ ಪವಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News