ಬಡತನ ವಿರುದ್ಧ ಹೋರಾಡಿದ ಧಾರಾವಿ ಯುವಕ ಈಗ ಸೇನಾಧಿಕಾರಿ

Update: 2024-03-10 02:23 GMT

Photo: PTI

ಮುಂಬೈ: ಧಾರಾವಿ-ಸಿಯಾ ಕೋಳಿವಾಡದ ನಿವಾಸಿಗಳಿಗೆ ಶನಿವಾರ ಸಂಭ್ರಮದ ದಿನ. ಸ್ಥಳೀಯ ನಿವಾಸಿ 26 ವರ್ಷದ ಉಮೇಶ್ ದಿಲ್ಲಿರಾವ್ ಕೀಲು ಭಾರತೀಯ ಸೇನೆಯ ಅಧಿಕಾರಿಯಾಗಿ ನಿಯುಕ್ತಿಗೊಂಡ ಅಪೂರ್ವ ಕ್ಷಣ. ಈ ಕೊಳಗೇರಿಯಿಂದ ಸೇನೆಯ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವುದು ಇದೇ ಮೊದಲು ಎಂದು timesofindia ವರದಿ ಮಾಡಿದೆ.

ಚೆನ್ನೈಯಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪೆರೇಡ್‍ನಲ್ಲಿ ತಾಯಿ, ಸಹೋದರಿ ಸೇರಿದಂತೆ ಕುಟುಂಬದ ಒಂಬತ್ತು ಮಂದಿ ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಈ ಹಸಿರು ಸಮವಸ್ತ್ರ ಧರಿಸುವ ಮುನ್ನ ಉಮೇಶ್ ಬಡತನ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದ್ದರು.

"ಪೈಂಟರ್ ಆಗಿದ್ದ ನಮ್ಮ ತಂದೆ 2013ರಲ್ಲಿ ಪಾಶ್ರ್ವ ವಾಯುಪೀಡಿತರಾದರು. ನಾನು ಸೇನಾ ತರಬೇತಿಗೆ ಸೇರುವ ಒಂದು ದಿನ ಮೊದಲು ಅಂದರೆ 2023ರ ಮಾರ್ಚ್‍ನಲ್ಲಿ ಹೃದಯಾಘಾತದಿಂದ ನಿಧನರಾದರು" ಎಂದು ಉಮೇಶ್ ಹೇಳಿದ್ದಾರೆ. "ಇಂದು ನನ್ನ 11 ತಿಂಗಳ ತರಬೇತಿ ಮುಗಿದು ಸೇನೆಯ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದೇನೆ"

ಸುಡುಬಿಸಿಲಲ್ಲೇ ತಮ್ಮ ಬಾಲ್ಯವನ್ನು ಕಳೆದ ಉಮೇಶ್‍ಗೆ ಕಿತ್ತುತಿನ್ನುವ ಬಡತನವೇ ಯಶಸ್ಸಿನ ರಹದಾರಿಯಾಯಿತು. ಸ್ವಂತ ದುಡಿಮೆಯಿಂದಲೇ ಶಿಕ್ಷಣ ಪಡೆದು, ವಿದ್ಯಾರ್ಥಿ ವೇತನ ಸಂಫಾದಿಸಿ, ಸ್ಥಳೀಯ ಸೈಬರ್ ಕೆಫೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಹದಿಹರೆಯವನ್ನು ಕಳೆದ ಉಮೇಶ್ ಕೊನೆಗೂ ತಮ್ಮ ಗುರಿ ಸಾಧಿಸಿದ್ದಾರೆ. ಈ ಹಾದಿಯಲ್ಲಿ ಅವರು ಟಾಟಾ ಟ್ರಸ್ಟ್, ಪಿಎಫ್ ದಾವರ್ ಟ್ರಸ್ಟ್ ಮತ್ತು ಮಹಾಲಕ್ಷ್ಮಿ ಟ್ರಸ್ಟ್‍ನಿಂದ ನೆರವು ಪಡೆದಿದ್ದರು.

ಐಟಿ ವಿಷಯದಲ್ಲಿ ಬಿಎಸ್ಸಿ ಪದವಿ ಪಡೆದು ಬಳಿಕ ಕಂಪ್ಯೂಟರ್ ಸೈನ್ಸ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. "ಮೂರು ವರ್ಷ ಟಿಸಿಎಸ್‍ನಲ್ಲಿ ಕೆಲಸ ಮಾಡಿ ಬಳಿಕ ಬ್ರಿಟಿಷ್ ಕೌನ್ಸಿಲ್‍ನಲ್ಲಿ ವಾರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದೆ" ಎಂದು ನೆನಪಿಸಿಕೊಂಡರು. ತಂದೆಯ ಚಿಕಿತ್ಸೆ ಹಾಗೂ ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿಯ ಸವಾಲನ್ನು ಸಮರ್ಥವಾಗಿ ನಿಭಾಯಿಸಿದರು.

ಎನ್‍ಸಿಸಿಯಲ್ಲಿದ್ದ ಉಮೇಶ್ ರಕ್ಷಣಾ ಪಡೆಯಲ್ಲಿ ವೃತ್ತಿಜೀವನದ ಕನಸು ಕಾಣುತ್ತಿದ್ದರು. 13 ಪ್ರಯತ್ನಗಳ ಬಳಿಕ ಎಸ್‍ಎಸ್‍ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಐಟಿ ಇನ್‍ಫ್ಯಾಂಟ್ರಿ ಯುನಿಟ್‍ನಲ್ಲಿ ಇದೀಗ ನಿಯುಕ್ತಿಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News