ಹರ್ಯಾಣದ ಮಾಜಿ ಮತ್ತು ಹಾಲಿ ಶಾಸಕರ ಮನೆ ಮೇಲೆ ಈಡಿ ದಾಳಿ : ಐದು ಕೋಟಿ ರೂ., ಅಕ್ರಮ ಶಸ್ತ್ರಾಸ್ತ್ರಗಳು ವಶ

Update: 2024-01-05 16:58 GMT

ಚಂಡಿಗಡ: ಹರ್ಯಾಣದ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಮತ್ತು ಮಾಜಿ ಐಎನ್ಎಲ್ಡಿ ಶಾಸಕ ದಿಲ್ಬಾಗ್ ಸಿಂಗ್ ಅವರ ಮನೆಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಈ.ಡಿ)ವು ಐದು ಕೋಟಿ ರೂ.ನಗದು ಹಣ, ಅಕ್ರಮ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು,ಸುಮಾರು 300 ಗುಂಡುಗಳು ಮತ್ತು ನೂರಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಈಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪನ್ವಾರ್, ಸಿಂಗ್ ಮತ್ತು ಅವರ ಸಹವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತ್ತು. ಸಿಂಗ್ ಯಮುನಾನಗರದ ಮಾಜಿ ಶಾಸಕರಾಗಿದ್ದರೆ, ಪನ್ವಾರ್ ಸೋನಿಪತ್ನ ಹಾಲಿ ಶಾಸಕರಾಗಿದ್ದಾರೆ. ಗುರುವಾರ ಯಮುನಾನಗರ, ಸೋನಿಪತ್, ಮೊಹಾಲಿ, ಫರೀದಾಬಾದ್, ಚಂಡಿಗಡ ಮತ್ತು ಕರ್ನಾಲ್ ನಲ್ಲಿಯ 20 ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು.

ಮದ್ಯ ಮತ್ತು ನಗದು ಹಣದ ಜೊತೆಗೆ 4ರಿಂದ 5 ಕೆ.ಜಿ.ತೂಕದ ಮೂರು ಚಿನ್ನದ ಬಿಸ್ಕಿಟ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಗಣಿಗಾರಿಕೆ ನಿಷೇಧಿಸಿದ ಬಳಿಕ ಯಮುನಾನಗರ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಅಕ್ರಮ ಮರಳು ಮತ್ತು ಬಂಡೆಗಲ್ಲುಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ಹರ್ಯಾಣ ಪೋಲಿಸರು ದಾಖಲಿಸಿದ್ದ ಹಲವಾರು ಪ್ರಕರಣಗಳ ಆಧಾರದಲ್ಲಿ 2013ರಲ್ಲಿ ಈಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News