ಹಿಂದೂ ಸಮಾಜವು ಜಾತಿ ಭೇದಗಳನ್ನು ಹೋಗಲಾಡಿಸಲು ದಲಿತರು ಮತ್ತು ದುರ್ಬಲ ವರ್ಗಗಳೊಂದಿಗೆ ತೊಡಗಿಸಿಕೊಳ್ಳಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2024-10-13 09:12 GMT

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Photo: PTI)

ನಾಗಪುರ: ಹಿಂದೂ ಸಮಾಜದಲ್ಲಿರುವ ಜಾತಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ದಲಿತರು ಮತ್ತು ದುರ್ಬಲ ವರ್ಗಗಳೊಂದಿಗೆ ತೊಡಗಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗಪುರದ ಆರೆಸ್ಸೆಸ್ ಪ್ರಧಾನ ಕಛೇರಿಯಲ್ಲಿ ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಹೇಳಿಕೆ ನೀಡಿದ್ದಾರೆ.

ರಾಷ್ಟ್ರವನ್ನು ಜಾತಿ ಮತ್ತು ಸಮುದಾಯದ ಆಧಾರದ ಮೇಲೆ ವಿಭಜಿಸಲು ಕೆಲವು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಇದರಲ್ಲಿ ಭಾಗಿಯಾಗಿವೆ ಎಂದು ಅವರು ಆರೋಪಿಸಿದರು.

ಈಗಿನ ಸಮಾಜದಲ್ಲಿನ ಸ್ಥಿತಿಯು ಸಂತರು ಮತ್ತು ದೇವತೆಗಳ ನಡುವೆ ವಿಭಜನೆಗೆ ಕಾರಣವಾಗಿದೆ. ವಾಲ್ಮೀಕಿ ಕಾಲನಿಗಳಲ್ಲಿ ಮಾತ್ರ ವಾಲ್ಮೀಕಿ ಜಯಂತಿಯನ್ನು ಏಕೆ ಆಚರಿಸಬೇಕು? ಎಂದು ಪ್ರಶ್ನಿಸಿದ ಅವರು ರಾಮಾಯಣ ಬರೆದ ವಾಲ್ಮೀಕಿ ಇಡೀ ಹಿಂದೂ ಸಮಾಜಕ್ಕೆ ಪರಂಪರೆಯನ್ನು ಸೃಷ್ಟಿಸಿದವರು ಎಂದು ಪ್ರತಿಪಾದಿಸಿದರು.

ಎಲ್ಲಾ ಹಿಂದೂಗಳು ವಾಲ್ಮೀಕಿ ಜಯಂತಿ ಮತ್ತು ರವಿದಾಸ ಜಯಂತಿಯಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಬೇಕು. ಆರೆಸ್ಸೆಸ್ ಈ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ ಎಂದು ಭಾಗವತ್ ಒತ್ತಿ ಹೇಳಿದರು.

ಆರೋಗ್ಯಕರ ಸಮಾಜಕ್ಕೆ ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಸೌಹಾರ್ದತೆಯಿರಬೇಕು. ಅದು ಕೇವಲ ಸಾಂಕೇತಿಕ ಕಾರ್ಯಕ್ರಮಗಳ ಮೂಲಕ ಸಾಕಾಗುವುದಿಲ್ಲ. ಸಮಾಜದ ವಿವಿಧ ವಿಭಾಗಗಳಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳ ನಡುವೆ ನಿಜವಾದ ಸ್ನೇಹ ಇಂದಿನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

"ಭಾಷೆಗಳು ವೈವಿಧ್ಯಮಯವಾಗಿರಬಹುದು, ಸಂಸ್ಕೃತಿಗಳು ವೈವಿಧ್ಯಮಯವಾಗಿರಬಹುದು, ಆಹಾರವು ವೈವಿಧ್ಯಮಯವಾಗಿರಬಹುದು, ಆದರೆ ವ್ಯಕ್ತಿಗಳು ಮತ್ತು ಸಮುದಾಯದ ನಡುವಿನ ಸ್ನೇಹವು ಸಮಾಜದಲ್ಲಿ ಸಾಮರಸ್ಯವನ್ನು ತರುತ್ತದೆ" ಎಂದು ಅವರು ಉಲ್ಲೇಖಿಸಿದರು.

ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ಅವರು, ಶಾಂತಿಯನ್ನು ಮರುಸ್ಥಾಪಿಸಲು ಮೋದಿ ಸರ್ಕಾರವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ .ಹೊರಗಿನ ಶಕ್ತಿಗಳು ಈ ಅಶಾಂತಿಯಲ್ಲಿ ಭಾಗಿಯಾಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳ ನಡುವಿನ ಪೈಪೋಟಿಯನ್ನು ಟೀಕಿಸಿದ ಅವರು, ಸ್ವಾರ್ಥಿ ಹಿತಾಸಕ್ತಿಗಳು ಪರಸ್ಪರ ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಮರೆತಾಗ ಅದು ಸಮಾಜದ ಸಮಗ್ರತೆಯನ್ನು ಹಾಳುಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News