ಜಮ್ಮು-ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

Update: 2023-10-26 15:24 GMT

                                                                     ಸಾಂದರ್ಭಿಕ ಚಿತ್ರ | Photo: PTI

ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರಾದ ಮಛಿಲ್ ಸೆಕ್ಟರ್‌ನಲ್ಲಿ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕಾಶ್ಮೀರ ಪೋಲಿಸರು ಗುರುವಾರ ತಿಳಿಸಿದರು.

‘ಕುಪ್ವಾರಾ ಪೋಲಿಸರು ನೀಡಿದ ನಿರ್ದಿಷ್ಟ ಮಾಹಿತಿಯ ಮೇರೆಗೆ ಮಛಿಲ್ ಸೆಕ್ಟರ್‌ನಲ್ಲಿ ಎನ್‌ಕೌಂಟರ್ ಆರಂಭವಾಗಿದ್ದು, ಈವರೆಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಾರ್ಯಾಚರಣೆ ಈಗಲೂ ನಡೆಯುತ್ತಿದೆ ’ ಎಂದು ಕಾಶ್ಮೀರ ವಲಯ ಪೋಲಿಸರು x ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ನಡುವೆ,‘ಗುರುವಾರ ಬೆಳಿಗ್ಗೆ ಜಮ್ಮು-ಕಾಶ್ಮೀರ ಪೋಲಿಸರು, ಭಾರತೀಯ ಸೇನೆಯ ಯೋಧರು ಜಂಟಿ ಕಾರ್ಯಾಚರಣೆಯಲ್ಲಿ ಕುಪ್ವಾರಾ ಸೆಕ್ಟರ್‌ನಲ್ಲಿ ಒಳನುಸುಳುವ ಪ್ರಯತ್ನವೊಂದನ್ನು ವಿಫಲಗೊಳಿಸಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ ’ಎಂದು ಸೇನೆಯ ಚಿನಾರ್ ಕಾರ್ಪ್ಸ್ x ಪೋಸ್ಟ್‌ನಲ್ಲಿ ತಿಳಿಸಿದೆ.

ಕಳೆದ ವಾರ ಬಾರಾಮುಲ್ಲಾದ ಉಡಿ ಸೆಕ್ಟರ್‌ನಲ್ಲಿ ಒಳನುಸುಳುವ ಯತ್ನವೊಂದನ್ನು ವಿಫಲಗೊಳಿಸಿದ್ದ ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿದ್ದವು.

ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪೊಂದು ಪ್ರತಿಕೂಲ ಹವಾಮಾನ, ನಿರಂತರ ಮಳೆ ಮತ್ತು ಕಳಪೆ ಗೋಚರತೆಯ ಲಾಭವನ್ನು ಪಡೆದುಕೊಂಡು ಉಡಿ ಸೆಕ್ಟರ್‌ನಲ್ಲಿ ಗಡಿಯೊಳಗೆ ನುಸುಳಲು ಪ್ರಯತ್ನಿಸಿತ್ತು ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News