ಮಾರ್ಚ್ 16ರಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್

Update: 2024-02-17 07:36 GMT

ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಾನು ಜಾರಿ ಮಾಡಿದ ಐದು ಸಮನ್ಸ್‌ಗಳಿಗೆ ದಿಲ್ಲಿ ಮುಖ್ಯಮಂತ್ರಿ ಗೈರು ಹಾಜರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಮೊರೆ ಹೋಗಿದ್ದ ಪ್ರಕರಣದಲ್ಲಿ ತನ್ನೆದುರು ಮಾರ್ಚ್ 16ರಂದು ಖುದ್ದು ಹಾಜರಾಗಲು ಅರವಿಂದ್ ಕೇಜ್ರಿವಾಲ್ ಅವರಿಗೆ ದಿಲ್ಲಿ ನ್ಯಾಯಾಲಯವೊಂದು ಅನುಮತಿ ನೀಡಿದೆ. ಇದಕ್ಕೂ ಮುನ್ನ, ತನಗೆ ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ಪರೀಕ್ಷೆ ಇರುವುದರಿಂದ ಕಾಲಾವಕಾಶ ಬೇಕು ಎಂದು ವಿಡಿಯೊ ಸಂದೇಶವೊಂದರ ಮೂಲಕ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇಂದು ದಿಲ್ಲಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಚರ್ಚೆ ಇರುವುದರಿಂದ ನಾನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯಕ್ಕೆ ತಿಳಿಸಿದರು.

"ನಾನು ನ್ಯಾಯಾಲಯಕ್ಕೆ ಆಗಮಿಸಲು ಬಯಸಿದ್ದೆ. ಆದರೆ, ದಿಢೀರನೆ ವಿಶ್ವಾಸ ಮತ ಪರೀಕ್ಷೆ ಎದುರಾಗಿದೆ. ಇದರೊಂದಿಗೆ ಬಜೆಟ್ ಅಧಿವೇಶನ ಕೂಡಾ ನಡೆಯುತ್ತಿದ್ದು, ಮಾರ್ಚ್ 1ರವರೆಗೆ ಮುಂದುವರಿಯಲಿದೆ. ಅದಾದ ನಂತರ ಯಾವ ದಿನಾಂಕವನ್ನಾದರೂ ನಿಗದಿಗೊಳಿಸಬಹುದು" ಎಂದು ಕೇಜ್ರಿವಾಲ್ ವಿಡಿಯೊ ಸಂದೇಶದಲ್ಲಿ ಮನವಿ ಮಾಡಿದರು.

ಅರವಿಂದ್ ಕೇಜ್ರಿವಾಲ್ ಮನವಿಯನ್ನು ಮನ್ನಿಸಿದ ನ್ಯಾಯಾಲಯವು, ಮಾರ್ಚ್ 16ರಂದು ಬೆಳಗ್ಗೆ 10 ಗಂಟೆಗೆ ತನ್ನೆದುರು ಖುದ್ದು ಹಾಜರಾಗಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News