‘ಒಂದು ದೇಶ, ಒಂದು ಚುನಾವಣೆ ’ ಯೋಜನೆಗೆ ಕೇರಳ ಸಿಎಂ ವಿರೋಧ

Update: 2023-09-05 16:52 GMT

ಪಿಣರಾಯಿ ವಿಜಯನ್ | Photo: PTI 

ತಿರುವನಂತಪುರ: ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ‘ಒಂದು ದೇಶ,ಒಂದು ಚುನಾವಣೆ ’ಯೋಜನೆಯ ಜಾರಿಗೆ ಕೇಂದ್ರ ಸರಕಾರದ ಚಿಂತನೆಯ ನಡುವೆಯೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕೇಂದ್ರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವ ಈ ಕ್ರಮವನ್ನು ಪ್ರತಿರೋಧಿಸಲು ಪ್ರಜಾಪ್ರಭುತ್ವ ಶಕ್ತಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಸಂಘ ಪರಿವಾರದ ‘ಒಂದು ದೇಶ,ಒಂದು ಚುನಾವಣೆ ’ಘೋಷಣೆಯು ಭಾರತದ ಪರಿಕಲ್ಪನೆ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಅದರ ಸಾಂವಿಧಾನಿಕ ತತ್ತ್ವಗಳಿಗೆ ಬೆದರಿಕೆಯೊಡ್ಡುತ್ತದೆ. ಅದು ದೇಶದ ಒಕ್ಕೂಟ ಸ್ವರೂಪಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಕೇಂದ್ರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಸಂಸದೀಯ ವ್ಯವಸ್ಥೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿರುವ ರಾಜ್ಯಸಭೆಯ ಪ್ರಸ್ತುತತೆಯನ್ನು ‘ಒಂದು ದೇಶ,ಒಂದು ಚುನಾವಣೆ’ ಕ್ರಮದ ಮೂಲಕ ಪ್ರಶ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಿವಿಧ ಹಂತಗಳಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗಳು ರಾಜ್ಯಸಭೆಯ ಸಂಯೋಜನೆಯನ್ನು ನಿರ್ಧರಿಸುತ್ತವೆ. ಏಕಕಾಲದಲ್ಲಿ ಎಲ್ಲ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ನಡೆಸುವುದರಿಂದ ರಾಜ್ಯಸಭೆಯಲ್ಲಿನ ರಾಜಕೀಯ ವೈವಿಧ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಪಿಣರಾಯಿ ಬೊಟ್ಟು ಮಾಡಿದ್ದಾರೆ.

ಮುಂಬರುವ ಐದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸೋಲುವ ಭೀತಿಯಿಂದಾಗಿ ‘ಒಂದು ದೇಶ,ಒಂದು ಚುನಾವಣೆ ’ ಯೋಜನೆಯ ಜಾರಿಗೆ ಸಂಘಪರಿವಾರವು ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಸೋಲು ಲೋಕಸಭಾ ಚುನಾವಣೆಯಲ್ಲಿ ಪರಿಣಾಮವನ್ನು ಬೀರುತ್ತದೆ ಎನ್ನುವುದು ಸಂಘ ಪರಿವಾರಕ್ಕೆ ತಿಳಿದಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News