"ಕಾಂಗ್ರೆಸ್ ಏಕೆ ಸೋತಿದೆ ಎಂದು ಅವಲೋಕಿಸಬೇಕಿದೆ": ಭೂಪಿಂದರ್ ಹೂಡಾಗೆ ಕುಟುಕಿದ ಕುಮಾರಿ ಸೆಲ್ಜಾ
ಹೊಸದಿಲ್ಲಿ: ಹರ್ಯಾಣ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಹರ್ಯಾಣದ ಕಾಂಗ್ರೆಸ್ ನ ಹಿರಿಯ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದು, ಕಾಂಗ್ರೆಸ್ ಏಕೆ ಸೋತಿದೆ ಎಂಬುದನ್ನು ಅವಲೋಕಿಸಬೇಕಿದೆ ಎಂದು ಭೂಪಿಂದರ್ ಹೂಡಾ ಅವರಿಗೆ ಕುಟುಕಿದ್ದಾರೆ.
NDTV ಜೊತೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ, ಹರ್ಯಾಣ ವಿಧಾನಸಭೆ ಚುನಾವಣೆ ಆರಂಭಿಕ ಮತ ಎಣಿಕೆ ವೇಳೆ ನಾನು ತುಂಬಾ ಉತ್ಸಕಳಾಗಿದ್ದೆ, ನಾವು ಹರ್ಯಾಣದ 90 ವಿಧಾನಸಭಾ ಸ್ಥಾನಗಳಲ್ಲಿ 60 ಸ್ಥಾನಗಳಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಅಂತಿಮ ಫಲಿತಾಂಶದಿಂದ ದೊಡ್ಡ ಹಿನ್ನೆಡೆಯಾಗಿದೆ. ನಮ್ಮ ಸೋಲಿಗೆ ಕಾರಣಗಳನ್ನು ನಾವು ಕಂಡು ಹುಡುಕುತ್ತೇವೆ, ಸೋಲಿಗೆ ಹಲವು ಕಾರಣಗಳು ಇರಬಹುದು, ನಾವು ಮುಂದಿನ ಚುನಾವಣೆಯಲ್ಲಿ ಇವುಗಳನ್ನು ಹೇಗೆ ನಿಭಾಯಿಸಬಹುದು ಎಂದು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದರೂ ಕಾಂಗ್ರೆಸ್ ನ ಕಳಪೆ ಸಾಧನೆಯನ್ನು ಒಪ್ಪಿಕೊಂಡ ಕುಮಾರಿ ಸೆಲ್ಜಾ, ನಾವು ಸೋಲಿಗೆ ಕಾರಣವಾದ ಅಂಶಗಳನ್ನು ಅವಲೋಕಿಸಬೇಕಿದೆ. ಟಿಕೆಟ್ ಹಂಚಿಕೆಯೂ ಕಾಂಗ್ರೆಸ್ ಸೋಲಿಗೆ ಒಂದು ಕಾರಣವಾಗಿದೆ ಎಂದು ಹೇಳಿದ್ದು, ಪರೋಕ್ಷವಾಗಿ ಸೋಲಿಗೆ ಭೂಪಿಂದರ್ ಹೂಡಾ ಅವರಿಗೆ ಕೈ ತೋರಿಸಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ಭೂಪಿಂದರ್ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಭೂಪಿಂದರ್ ಹೂಡಾ ತಮ್ಮ ಪಾಳಯದಲ್ಲಿನ ಸರಿಸಮಾರು 70 ಮಂದಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.