ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕುವ ಕೇಂದ್ರದ ನಿರ್ಧಾರ ವಿರೋಧಿಸಿ ಮಿಜೋರಾಂ ನಿರ್ಣಯ

Update: 2024-02-29 14:45 GMT

ಸಾಂದರ್ಭಿಕ ಚಿತ್ರ  | Photo: PTI 

 

ಐಝ್ವಾಲ್: ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಿ ಉಭಯ ದೇಶಗಳ ನಡುವಿನ ಮುಕ್ತ ಓಡಾಟವನ್ನು ನಿರ್ಬಂಧಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಮಿಜೋರಾಂ ವಿಧಾನಸಭೆಯು ಬುಧವಾರ ನಿರ್ಣಯವೊಂದನ್ನು ಅಂಗೀಕರಿಸಿದೆ.

ಮ್ಯಾನ್ಮಾರ್ ಜೊತೆಗಿನ ಭಾರತದ ಮುಕ್ತ ಓಡಾಟ ನೀತಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ತನ್ನ ಸಚಿವಾಲಯವು ಶಿಫಾರಸು ಮಾಡಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಫೆಬ್ರವರಿ 8ರಂದು ಹೇಳಿದ್ದರು. ಎರಡು ದೇಶಗಳ ನಡುವಿನ ಗಡಿಗೆ ಬೇಲಿ ಹಾಕಲಾಗುವುದು ಎಂಬುದಾಗಿ ಅವರು ಅದಕ್ಕೂ ಮುನ್ನ ಹೇಳಿದ್ದರು.

ಉಭಯ ದೇಶಗಳ ನಡುವಿನ ಮುಕ್ತಾ ಓಡಾಟ ನೀತಿ 1070ರ ದಶಕದಿಂದಲೂ ಚಾಲ್ತಿಯಲ್ಲಿದೆ. ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಅರುಣಾಚಲಪ್ರದೇಶಗಳ ಉದ್ದಕ್ಕೂ ಭಾರತ ಮತ್ತು ಮ್ಯಾನ್ಮಾರ್ಗಳು 1,643 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. ಈ ಗಡಿಯ ಹೆಚ್ಚಿನ ಭಾಗಗಳಲ್ಲಿ ಬೇಲಿ ಹಾಕಲಾಗಿಲ್ಲ. ಗಡಿಯ ಆಚೀಚೆ 16 ಕಿ.ಮೀ. ಒಳಗಿನ ಪ್ರದೇಶಗಳಲ್ಲಿ ವಾಸಿಸುವ ಜನರು ವೀಸಾ ಇಲ್ಲದೆ ಮುಕ್ತವಾಗಿ ಇನ್ನೊಂದು ಭಾಗಕ್ಕೆ ಪ್ರವೇಶಿಸಬಹುದಾಗಿದೆ.

ಮುಕ್ತ ಸಂಚಾರವನ್ನು ನಿರ್ಬಂಧಿಸುವ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಿಜೋರಾಂ ಗೃಹ ಸಚಿವ ಕೆ. ಸಪ್ದಂಗ ಮಂಡಿಸಿರುವ ನಿರ್ಣಯ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ. ಕುಕಿ-ರೆ ಜನಾಂಗೀಯರು ತಮ್ಮ ಪೂರ್ವಜರ ಭೂಮಿಯನ್ನು ವಿಭಜಿಸುವ ಬೇಲಿ ಇಲ್ಲದೆ ಜೊತೆಯಾಗಿ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂಬುದಾಗಿಯೂ ನಿರ್ಣಯವು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ.

ಮಣಿಪುರದ ಕುಕಿ ಸಮುದಾಯ ಮತ್ತು ಮ್ಯಾನ್ಮಾರ್ನ ಚಿನ್ ಬುಡಕಟ್ಟು ಸಮುದಾಯದೊಂದಿಗೆ ಮಿಜೊರಾಮಿನ ಮಿರೊ ಜನಾಂಗೀಯರು ಹತ್ತಿರದ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News