ಮಾರುಕಟ್ಟೆ ನಿಯಂತ್ರಣ ಉಲ್ಲಂಘನೆ | ರಾಜೇಶ್, ಗೌತಮ್ ಅದಾನಿ ಖುಲಾಸೆ

ಗೌತಮ್ ಅದಾನಿ | PC : PTI
ಮುಂಬೈ: ಸುಮಾರು 388 ಕೋ.ರೂ. ಒಳಗೊಂಡ ಮಾರುಕಟ್ಟೆ ನಿಯಂತ್ರಣಗಳ ಉಲ್ಲಂಘಿಸಿದ ಆರೋಪದ ಪ್ರಕರಣದಿಂದ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಆಡಳಿತ ನಿರ್ದೇಶಕ ರಾಜೇಶ್ ಅದಾನಿಯನ್ನು ಬಾಂಬೆ ಉಚ್ಛ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
ಗಂಭೀರ ಅಪರಾಧಗಳ ತನಿಖಾಧಿಕಾರಿ (ಎಸ್ಎಫ್ಐಒ) ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (ಎಇಎಲ್), ಅದರ ಪ್ರವರ್ತಕರಾದ ಗೌತಮ್ ಅದಾನಿ ಹಾಗೂ ರಾಜೇಶ್ ಅದಾನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಆರೋಪಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶ ರದ್ದುಗೊಳಿಸುವಂತೆ ಗೌತಮ್ ಅದಾನಿ ಹಾಗೂ ರಾಜೇಶ್ ಅದಾನಿ 2019ರಲ್ಲಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್.ಎನ್. ಲೋಧಾ ಅವರ ಏಕ ಸದಸ್ಯ ಪೀಠ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ ಹಾಗೂ ಇಬ್ಬರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿದೆ.