ಭೂ ವ್ಯವಹಾರ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಈಡಿ ಸಮನ್ಸ್

ರಾಬರ್ಟ್ ವಾದ್ರಾ (PTI)
ಹೊಸದಿಲ್ಲಿ: ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಇಂದು (ಮಂಗಳವಾರ) ಹಾಜರಾಗುವಂತೆ ಉದ್ಯಮಿ ರಾಬರ್ಟ್ ವಾದ್ರಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, "ಇದು ಬಿಜೆಪಿಯ ರಾಜಕೀಯ ಪ್ರಚೋದಿತ ಕ್ರಮ" ಎಂದು ಆರೋಪಿಸಿದರು. "ನಾನು ಯಾವಾಗೆಲ್ಲ ಜನರ ಪರ ಧ್ವನಿಯನ್ನು ಎತ್ತಲು ಪ್ರಯತ್ನಿಸುತ್ತೇನೊ, ಆವಾಗಲೆಲ್ಲ ಅವರು ನನ್ನ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದಾರೆ. ಅವರಿಗೇನು ಬೇಕೊ ಅದೆಲ್ಲವನ್ನೂ ಪ್ರಶ್ನಿಸಲಿ ಹಾಗೂ ನಾನು ಅವರಿಗೆ ಉತ್ತರಿಸುತ್ತೇನೆ" ಎಂದು ಹೇಳಿದರು.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಸಂಸದೆಯಾದ ಪ್ರಿಯಾಂಕಾ ಗಾಂಧಿ ವಾದ್ರಾರ ಪತಿಯಾದ ರಾಬರ್ಟ್ ವಾದ್ರಾ, ಹರ್ಯಾಣದಲ್ಲಿನ ಭೂ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಈ ಮುನ್ನ, ಎಪ್ರಿಲ್ 8ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತಾದರೂ, ಅವರು ವಿಚಾರಣೆಗೆ ಗೈರಾಗಿದ್ದರು.
56 ವರ್ಷದ ಉದ್ಯಮಿ ರಾಬರ್ಟ್ ವಾದ್ರಾ ಅವರು ಜಾರಿ ನಿರ್ದೇಶನಾಲಯದೆದುರು ವಿಚಾರಣೆಗೆ ಹಾಜರಾಗುತ್ತಿದ್ದಂತೆಯೆ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.