ಸುಗಂಧ ದ್ರವ್ಯ ವಿಚಾರಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿ ಪರಾರಿಯಾದ ಪತಿ!
ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹೊರಗೆ ಹೋಗುತ್ತಿದ್ದಾಗ ಸುಗಂಧ ದ್ರವ್ಯವನ್ನು ಹಾಕಿಕೊಂಡಿಕ್ಕಾಗಿ ತನ್ನ ಹೆಂಡತಿಯೊಂದಿಗೆ ಜಗಳಕ್ಕೆ ನಿಂತ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ನಂತರ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಿಜೋಯಿಲಿ ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾಟವ್ ಎಂಟು ವರ್ಷಗಳ ಹಿಂದೆ ಮಹೇಂದ್ರ ಜಾಟವ್ ನನ್ನು ವಿವಾಹವಾಗಿದ್ದರು. ಕ್ರಿಮಿನಲ್ ಇತಿಹಾಸ ಹೊಂದಿರುವ (ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ) ಮಹೇಂದ್ರ ಜಾಟವ್ ಜೈಲು ಪಾಲಾಗಿದ್ದನು. ನಂತರ ನೀಲಂ ತನ್ನ ಪೋಷಕರೊಂದಿಗೆ ವಾಸಿಸಲು ಆರಂಭಿಸಿದರು.
ನಾಲ್ಕು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ನಂತರ, ಮಹೇಂದ್ರ ಒಂದು ವರ್ಷದ ಹಿಂದೆ ಜೈಲಿನಿಂದ ಹೊರಬಂದನು ಹಾಗೂ ತನ್ನ ಹೆಂಡತಿಯೊಂದಿಗೆ ಆಕೆಯ ಹೆತ್ತವರ ಮನೆಯಲ್ಲಿ ವಾಸಿಸಲು ಆರಂಭಿಸಿದ್ದನು
ಶನಿವಾರ ನೀಲಂ ತನ್ನ ಮನೆಯಿಂದ ಹೊರಡಲು ತಯಾರಿ ನಡೆಸುತ್ತಿದ್ದಾಗ ಮಹೇಂದ್ರ ಸುಗಂಧ ದ್ರವ್ಯವನ್ನು "ಅತಿಯಾಗಿ ಲೇಪಿಸಿಕೊಂಡ" ಬಗ್ಗೆ ನೀಲಂರನ್ನು ಪ್ರಶ್ನಿಸಿದ್ದ, ಇದು ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಕೂಡಲೇ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದ ಭರಾಟೆಯಲ್ಲಿ ಮಹೇಂದ್ರ ಗನ್ ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿದ್ದಾನೆ. ನೀಲಂ ನೆಲಕ್ಕೆ ಬಿದ್ದಾಗ ಮಹೇಂದ್ರ ಸ್ಥಳದಿಂದ ಪರಾರಿಯಾಗಿದ್ದಾನೆ. ನೀಲಂ ಸಹೋದರ ದಿನೇಶ್ ತಕ್ಷಣವೇ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.