ಹೊಸದಿಲ್ಲಿ: ಐಐಟಿ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹೊಸದಿಲ್ಲಿ: ದಿಲ್ಲಿ ಐಐಟಿ(IIT) ದ್ವಿತೀಯ ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಜಾರ್ಖಂಡ್ ನ ದಿಯೋಘರ್ ಮೂಲದ ಕುಮಾರ್ ಯಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿ. ದಿಲ್ಲಿ ಐಐಟಿಯ ಎಂಎಸ್ಸಿ 2ನೇ ವರ್ಷದ ವಿದ್ಯಾರ್ಥಿಯೋರ್ವ ನಿನ್ನೆ ರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ANI ವರದಿ ಮಾಡಿದೆ.
ಕುಮಾರ್ ಯಶ್ ಮೃತದೇಹವಿದ್ದ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಆತನ ಸ್ನೇಹಿತರು ಮತ್ತು ಐಐಟಿ ಸಿಬ್ಬಂದಿಗಳು ಕಿಟಕಿಗಳನ್ನು ಒಡೆದು ಕೊಠಡಿಗೆ ಪ್ರವೇಶಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಹಾಸ್ಟೆಲ್ ಕೊಠಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಆದರೆ, ವೈದ್ಯಕೀಯ ದಾಖಲೆಗಳ ಪ್ರಕಾರ ಯಶ್ ಈ ಮೊದಲು ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ದರು ಎನ್ನುವುದನ್ನು ಸೂಚಿಸುತ್ತದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.