ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತವಾಗಿ ಸುಟ್ಟ ಪುತ್ರರು
ಅಗರ್ತಲ: ತಮ್ಮ ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿರುವ ಇಬ್ಬರು ಪುತ್ರರು, ಆಕೆಯನ್ನು ಜೀವಂತವಾಗಿ ದಹಿಸಿರುವ ಆಗಾತಕಾರಿ ಘಟನೆ ಪಶ್ಚಿಮ ತ್ರಿಪುರಾದಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮೃತ ಮಹಿಳೆಯ ಪುತ್ರರನ್ನು ಬಂಧಿಸಲಾಗಿದ್ದು, ಕೌಟುಂಬಿಕ ಕಲಹ ಈ ಬರ್ಬರ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚಂಪಕ್ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಮರ್ಬರಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ತನ್ನ ಪತಿ ತೀರಿಕೊಂಡ ನಂತರ, ಮೃತ ಮಹಿಳೆಯು ತನ್ನ ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಳು. ಮತ್ತೊಬ್ಬ ಪುತ್ರ ಅಗರ್ತಲದಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಸಿರುವ ಜಿರಾನಿಯ ಉಪ ವಲಯ ಪೊಲೀಸ್ ಅಧಿಕಾರಿ ಕಮಲ್ ಕೃಷ್ಣ ಕೊಲೊಯಿ, “ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಲಾಗಿದೆ ಎಂಬ ಮಾಹಿತಿ ಸ್ವೀಕರಿಸುತ್ತಿದ್ದಂತೆಯೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲಿ ಮಹಿಳೆಯೊಬ್ಬಳನ್ನು ಮರಕ್ಕೆ ಕಟ್ಟಿ ಹಾಕಿ, ಬೆಂಕಿ ಹಚ್ಚಿರುವುದು ಕಂಡು ಬಂದಿತು. ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು” ಎಂದು ಹೇಳಿದ್ದಾರೆ.
“ಈ ಸಂಬಂಧ ನಾವು ಮೃತ ಮಹಿಳೆಯ ಇಬ್ಬರು ಪುತ್ರರನ್ನು ಬಂಧಿಸಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಅಲ್ಲಿ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಕೋರಲಾಗುತ್ತದೆ. ಈ ಘಟನೆಗೆ ಕೌಟುಂಬಿಕ ಕಲಹ ಕಾರಣವಾಗಿರಬಹುದು” ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದ್ದಾರೆ.