ಸೂಚಿಸಿದ ಭಾಗಗಳನ್ನು ತೆಗೆಯಲು ‘ಎಮರ್ಜೆನ್ಸಿ’ ನಿರ್ಮಾಪಕರು ಒಪ್ಪಿದ್ದಾರೆ: ಬಾಂಬೆ ಹೈಕೋರ್ಟ್‌ಗೆ ಸೆನ್ಸಾರ್ ಮಂಡಳಿ ಮಾಹಿತಿ

Update: 2024-09-30 12:30 GMT

PC : X 

ಹೊಸದಿಲ್ಲಿ: ತನ್ನ ಪರಿಷ್ಕರಣೆ ಸಮಿತಿಯು ಸೂಚಿಸಿರುವ ಹೆಚ್ಚಿನ ಭಾಗಗಳನ್ನು ತೆಗೆದುಹಾಕಲು ‘ಎಮರ್ಜೆನ್ಸಿ’ ಹಿಂದಿ ಚಿತ್ರದ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸೋಮವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಚಿತ್ರವನ್ನು ಬಿಡುಗಡೆ ಮಾಡಲು ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಸಹ ನಿರ್ಮಾಪಕ ಝೀ ಎಂಟರ್‌ಟೇನ್‌ಮೆಂಟ್ ಕೋರಿತ್ತು. ಸೂಚಿಸಿರುವ ಭಾಗಗಳನ್ನು ತೆಗೆದುಹಾಕಿದ ಬಳಿಕ ಚಿತ್ರವನ್ನು ಬಿಡುಗಡೆ ಮಾಡಬಹುದು ಎಂದು ಸೆನ್ಸಾರ್ ಮಂಡಳಿಯು ಗುರುವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರವು ಸೆ.6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸಿಖ್ ಗುಂಪುಗಳು ಸೇರಿದಂತೆ ಹಲವರಿಂದ ಪ್ರತಿಭಟನೆಗಳ ಬಳಿಕ ಬಿಡುಗಡೆ ವಿಳಂಬಗೊಂಡಿದೆ.

ಚಲನಚಿತ್ರವು 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿದೆ. ಚಿತ್ರದ ಕಥೆಯನ್ನು ಬರೆದಿರುವ ಕಂಗನಾ ಅದರ ನಿರ್ದೇಶಕಿಯೂ ಆಗಿದ್ದು,ತನ್ನ ಮಣಿಕರ್ಣಿಕಾ ಫಿಲ್ಮ್ಸ್ ಮೂಲಕ ಸಹನಿರ್ಮಾಪಕಿಯೂ ಆಗಿದ್ದಾರೆ.

ಸೆನ್ಸಾರ್ ಮಂಡಳಿಯು ಚಿತ್ರದಲ್ಲಿ 13 ಬದಲಾವಣೆಗಳನ್ನು ಸೂಚಿಸಿದೆ. ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ‘ಸಂತ’ ಎಂದು ಉಲ್ಲೇಖಿಸಿರುವ ಸಂಭಾಷಣೆಯೊಂದರ ಭಾಗವನ್ನು ಹಾಗೂ ಕೆಲವು ಸಿಖ್ ವಿರೋಧಿ ಚಿತ್ರಣಗಳು ಮತ್ತು ಸಂಭಾಷಣೆಗಳನ್ನೂ ತೆಗೆಯುವಂತೆ ಸೂಚಿಸಲಾಗಿದೆ. ‘ಖಾಲಿಸ್ತಾನ್’ ಅನ್ನು ಉಲ್ಲೇಖಿಸಿರುವ ಸಂಭಾಷಣೆಯನ್ನೂ ಕೈಬಿಡುವಂತೆ ಸೆನ್ಸಾರ್ ಮಂಡಳಿಯು ಚಿತ್ರ ನಿರ್ಮಾಪಕರಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News