ವಕ್ಫ್ ತಿದ್ದುಪಡಿ ಕಾಯ್ದೆ ವಿವಾದ | ಜಂಟಿ ಸಂಸದೀಯ ಸಮಿತಿಯ ಭೇಟಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧಾರ

Update: 2024-08-10 15:14 GMT

PC : PTI 

ಹೊಸದಿಲ್ಲಿ : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಅವರು ಅಧ್ಯಕ್ಷತೆಯಲ್ಸಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳ ವರಿಷ್ಠರು ಹಾಗೂ ಕಾನೂನು ಸಮಿತಿಯ ಸದಸ್ಯರ ಸಭೆಯು ಇತ್ತೀಚೆಗೆ ನಡೆಯಿತು.

ಕೇಂದ್ರ ಸರಕಾರದ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆಯ ಕುರಿತಾಗಿ ಪ್ರತಿಪಕ್ಷ ನಾಯಕರು ಹಾಗೂ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ವರಿಷ್ಠರನ್ನು ಭೇಟಿಯಾಗಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಅನುಸಾರವಾಗಿ ವಿವಿಧ ರಾಜಕೀಯ ಧುರೀಣರೊಂದಿಗೆ ತುರ್ತು ಸಭೆಗಳನ್ನು ಆಯೋಜಿಸಲಾಗಿತ್ತು . ಈ ವಿಧೇಯಕದಲ್ಲಿನ ಪ್ರಮಾದಭರಿತ, ಕರಾಳ ಹಾಗೂ ಅಪ್ರಜಾಸತ್ಮಾತ್ಮಕ ಅಂಶಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಮುಸ್ಲಿಂ ಸಮುದಾಯದ ಸಂಸದರು ಹಾಗೂ ಇತರ ರಾಜಕೀಯ ವ್ಯಕ್ತಿಗಳಿಗೂ ಈ ಬಗ್ಗೆ ಪತ್ರಗಳನ್ನು ಬರೆಯಲಾಗಿದೆ.

ಈಗ ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ನೂತನ ವಕ್ಫ್ (ತಿದ್ದುಪಡಿ) ವಿಧೇಯಕವು ಹೊಂದಿದೆ. ವಕ್ಫ್ ಆಸ್ತಿಗಳನ್ನು ಬುಡಮೇಲುಗೊಳಿಸಲು, ವಕ್ಫ್ ಮಂಡಳಿಗಳನ್ನು ಅಧಿಕಾರವನ್ನು ಕಸಿಯಲು ಹಾಗೂ ವಕ್ಫ್ ಟ್ರಿಬ್ಯೂನಲ್‌ಗಳು ಹಾಗೂ ಸರ್ವೇಕ್ಷಣಾ ಆಯುಕ್ತರ ಅದಿಕಾರಿಗಲನ್ನು ಜಿಲ್ಲಾಧಿಕಾರಿಗಳು ಹಾಗೂ ಪಟ್ವಾರಿಗಳಿಗೆ ನೀಡಲು ಅದು ಬಯಸುತ್ತಿದೆ. ಹಾಲಿ ವಕ್ಫ್ ಕಾಯ್ದೆಗೆ ಕಳಂಕತರುವ ಹಾಗೂ ಅದನ್ನು ಅಪಮೌಲ್ಯಗೊಳಿಸುವಂತಹ ದುರುದ್ದೇಶವನ್ನು ಈ ವಿಧೇಯಕದ ಇತರ ನಿಯಮಗಳು ಹೊಂದಿವೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು ಪತ್ರಿಕಾ ಪ್ರಕಟಣೆಯಲ್ಲಿ ಆಪಾದಿಸಿದೆ.

ವಕ್ಫ್ ಕಾಯ್ದೆಯನ್ನು ತಿದ್ದುಪಡಿಗೊಳಿಸಿರುವುದು ಮಾತ್ರವಲ್ಲದೆ ಕೇಂದ್ರ ವಕ್ಫ್ ಕೌನ್ಸಿಲ್ ಹಾಗೂ ವಕ್ಫ್ ಮಂಡಳಿಗೆ ವ್ಯಕ್ತಿಗಳನ್ನು ತಾನಾಗಿಯೇ ನೇಮಿಸುವ ಮೂಲಕ ಅವುಗಳ ಅಧಿಕಾರವನ್ನು ಕೇಂದ್ರ ಸರಕಾರವು ಕಸಿದುಕೊಂಡಿದೆ. ಎಐಎಂಪಿಎಲ್‌ಬಿ ಈ ವಿಧೇಯಕವನ್ನು ಬಲವಾಗಿ ವಿರೋಧಿಸುತ್ತದೆ ಹಾಗೂ ಕೇಂದ್ರ ಸರಕಾರದ ದುಷ್ಟ ಉದ್ದೇಶವು ಈಡೇರುವುದಕ್ಕೆ ಅವಕಾಶ ನೀಡದಂತೆ ಅದು ಎಲ್ಲಾ ಪ್ರತಿಪಕ್ಷಗಳು ಹಾಗೂ ಬಿಜೆಪಿಯ ಮಿತ್ರಪಕ್ಶಗಳಿಗೆ ಕಳಕಳಿಯ ಮನವಿ ಮಾಡಿದೆ. ಬಹುತೇಕ ಎಲ್ಲಾ ಪ್ರತಿಪಕ್ಷಗಳು ಈ ವಿಧೇಯಕವನ್ನು ತಿರಸ್ಕರಿಸಿರುವುದು ಶ್ಲಾಘನೀಯವೆಂದು ಅದು ತಿಳಿಸಿದೆ.

ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಧ್ವನಿಯೆತ್ತಿದ ಸಂಸದರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯು ತಿಳಿಸಿದೆ.

ಈ ವಿವಾದಾತ್ಮಕ ವಿಧೇಯಕವನ್ನು ಹಿಂದೆಗೆದುಕೊಳ್ಳುವಂತೆ ಮಾಡಲು ಜಂಟಿ ಸಂಸದೀಯ ಸಮಿತಿ ಸಭೆಗಳಲ್ಲಿ ಪ್ರತಿಪಕ್ಷಗಳು ಹಾಗೂ ಅವುಗಳ ಮಿತ್ರಪಕ್ಷಗಳು ಗರಿಷ್ಠ ಪ್ರಯತ್ನಗಳನ್ನು ಮಾಡಲಿವೆ.ಮಂಡಳಿಯು ಮುಸ್ಲಿಂ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರುವಂತಹ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತುವಂತೆ ಮಂಡಳಿಯು ಕೆಲವು ರಾಜಕೀಯ ನಾಯಕರನ್ನು ಕೋರಿತ್ತು. ಅದರಂತೆ ಅವರು ಸಂಸತ್‌ನಲ್ಲಿ ವಿಧೇಯಕದ ಕುರಿತು ತಾನು ವ್ಯಕ್ತಿಪಡಿಸಿರುವ ಕಳವಳಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆಂದು ಎಐಎಂಪಿಎಲ್‌ಬಿ ಹೇಳಿಕೆ ತಿಳಿಸಿದೆ.

ತತ್ಕಾಲಕ್ಕೆ ವಕ್ಫ್ ತಿದ್ದುಪಡಿ ಕಾಯ್ದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳದಿರುವುದಕ್ಕಾಗಿ ಹಾಗೂ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಿರುವುದಕ್ಕೆ ಎಏಎಂಪಿಎಲ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಜಂಟಿ ಸಂಸದೀಯ ಸಮಿತಿಯು ರಚನೆಯಾದ ಕೂಡಲೇ ಅದರ ಸದಸ್ಯರನ್ನು ಮಂಡಳಿಯು ಭೇಟಿಯಾಗಲಿದ್ದು, ಮುಸ್ಲಿಮ್ ಸಮುದಾಯದ ಅಭಿಪ್ರಾಯಗಳನ್ನು ವಿವರಿಸಲಿದೆ. ತಮ್ಮ ಪ್ರದೇಶಗಳ ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಹಾಗೂ ದುರ್ಬಳಕೆಯಿಂದ ರಕ್ಷಿಸಲ್ಪಡುವಂತೆ ನೋಡಿಕೊಳ್ಳಬೇಕೆಂದು ಮುಸ್ಲಿಮರಿಗೆ ಮಂಡಳಿಯು ಮನವಿ ಮಾಡಿದೆ. ತಮ್ಮ ಪೂರ್ವಿಕರ ಪರಂಪೆಯನ್ನು ಅವರು ಸಂರಕ್ಷಿಸಬೇಕು ಹಾಗೂ ವಕ್ಫ್ ಅಧಿಕಾರದ ಕಬಳಿಕೆಗೆ ಅವಕಾಶ ನೀಡಕೂಡದು. ವಕ್ಫ್ ವಿವಾದದ ಬಗ್ಗೆ ಮಸೀದಿಗಳ ಇಮಾಮ್‌ಗಳು ಮುಸ್ಲಿಮರಲ್ಲಿ ಅರಿವು ಮೂಡಿಸಬೇಕು ಹಾಗೂ ಪ್ರಾರ್ಥನೆಗಳನ್ನು ಏರ್ಪಡಿಸಬೇಕೆಂದು ಎಐಎಂಪಿಎಲ್‌ಬಿಯ ಕಾರ್ಯಾಲಯ ಕಾರ್ಯದರ್ಶಿ ಡಾ. ಎಂ. ವಖಾರ್ ಉದ್ದೀನ್ ಲತೀಫಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News