ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವುದಿಲ್ಲ: ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿಶ್ವಾಸ!
ಪುದುಪಳ್ಳಿ, ಮೇ 16: ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಭಾರೀ ಬಹುಮತದೊಂದಿಗೆ ವಿಜಯ ದಾಖಲಿಸಲಿದೆ ಎಂದಿರುವ ಕೇರಳ ಯುಡಿಎಫ್ ನಾಯಕ ಹಾಗೂ ಮುಖ್ಯಮಂತ್ರಿ ಉಮ್ಮನ್ಚಾಂಡಿ ಬಿಜೆಪಿಯಂತೂ ಈ ಸಲವೂ ಖಾತೆ ತೆರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುದುಪಳ್ಳಿಯಲ್ಲಿ ಕುಟುಂಬ ಸಮೇತ ಬಂದು ಮತದಾನ ಮಾಡಿದ ನಂತರ ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿಗೆ ಒಂದು ಸೀಟು ಸಿಗುವುದಿಲ್ಲ. ಕೇರಳದಲ್ಲಿ ಸರಕಾರ ಬದಲಾವಣೆಯೂ ಆಗುವುದಿಲ್ಲ. ಯುಡಿಎಫ್ ಈ ಸಲ ಕಳೆದ ಸಲಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ.ಯುಡಿಎಫ್ನ ಒಗ್ಗಟ್ಟು ತನ್ನ ಆತ್ಮವಿಶ್ವಾಸಕ್ಕೆ ಕಾರಣವೆಂದು ಅವರು ಹೇಳಿದರು. ಒಂದುವೇಳೆ ಯುಡಿಎಫ್ ಸೋಲುಂಡರೆ ಅದರ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ಹೊರುತ್ತೇನೆ ಎಂದೂ ಹೇಳಿದ್ದಾರೆ. ಯುಡಿಎಫ್ನ ಗೆಲುವನ್ನು ನೋಡಲು ಇನ್ನೂ ಒಂದೆರಡು ದಿವಸ ಕಾಯಿರಿ ಎಂದು ಎಲ್ಡಿಫ್ ನೇತಾರ ಅಚ್ಚ್ಯುತಾನಂದನ್ರಿಗೆ ಕರೆನೀಡಿದರು. ಬಂಗಾಳದಲ್ಲಿ ಎದ್ದು ನಿಲ್ಲಲು ಸಾಧ್ಯ ಆಗದ ಸಿಪಿಎಂಗೆ ಕೇರಳದಲ್ಲಿ ಯುಡಿಎಫ್ನ್ನು ನಿರ್ಮೂಲಿಸಲು ಸಾಧ್ಯವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ರಾಷ್ಟ್ರೀಯ ಮಾಧ್ಯಮಗಳ ಬಹುದೊಡ್ಡ ತಂಡವೇ ಪುದುಪಳ್ಳಿಗೆ ಬಂದಿದೆ.