ಪಾತಕಿ ದಾವೂದ್ ಇಬ್ರಾಹಿಂ ಅತಿಹೆಚ್ಚು ಕರೆ ಮಾಡಿದ ಪಟ್ಟಿಯಲ್ಲಿ ಮಹಾರಾಷ್ಟ್ರ ಬಿಜೆಪಿ ಸಚಿವ ಏಕನಾಥ ಖಡ್ಸೆ
ಮುಂಬೈ,ಮೇ 22. ಪಾತಕಿ ದಾವೂದ್ ಇಬ್ರಾಹಿಂ ಅತಿಹೆಚ್ಚು ಕರೆ ಮಾಡಿದವರ ಪಟ್ಟಿಯಲ್ಲಿ ಮಹಾರಾಷ್ಟ್ರ ಬಿಜೆಪಿ ಸಚಿವ ಏಕನಾಥ ಖಡ್ಸೆ ಅಗ್ರಸ್ಥಾನದಲ್ಲಿರುವುದು ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿಗೆ ತೀವ್ರ ಮುಜುಗರ ಪರಿಸ್ಥಿತಿ ಎದುರಾಗಿದೆ.
ಈ ಸ್ಫೋಟಕ ಮಾಹಿತಿಯನ್ನು ಶನಿವಾರ ಬಹಿರಂಗಪಡಿಸಿದ ಆಮ್ ಆದ್ಮಿ ಪಕ್ಷ, ಈ ಸಚಿವರನ್ನು ತಕ್ಷಣ ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ದಾವೂದ್ ಇಬ್ರಾಹಿಂ ಅವರು ಕರಾಚಿಯ ತಮ್ಮ ನಿವಾಸದಿಂದ ಸಚಿವರ ಮೊಬೈಲ್ ಸಂಖ್ಯೆಗೆ ಅತಿಹೆಚ್ಚು ಬಾರಿ ಕರೆ ಮಾಡಿರುವುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಈ ಆರೋಪವನ್ನು ನಿರಾಕರಿಸುವ ಪ್ರಯತ್ನವನ್ನು ಖಡ್ಸೆ ಮಾಡಿದ್ದರಾದರೂ, ಇದೀಗ ಬಹಿರಂಗವಾಗಿರುವ ದಾಖಲೆಗಳು ಈ ವಿವಾದಾತ್ಮಕ ಸಚಿವರಿಗೆ ಮತ್ತಷ್ಟು ಮುಜುಗರ ತರುವಂತಿವೆ. 2015ರ ಸೆಪ್ಟೆಂಬರ್ನಿಂದ 2016ರ ಏಪ್ರಿಲ್ ವರೆಗೆ ತಮ್ಮ ಈ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಲಿಲ್ಲ ಎಂದು ಖಡ್ಸೆ ಸಮರ್ಥಿಸಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ವಕ್ತಾರರಾದ ಪ್ರೀತಿ ಶರ್ಮಾ ಮೆನನ್, "ಈ ಸಂಖ್ಯೆ ಕಳೆದ ತಿಂಗಳ ವರೆಗೂ ಚಾಲ್ತಿಯಲ್ಲಿತ್ತು" ಎಂದು ತಿರುಗೇಟು ನೀಡಿದ್ದಾರೆ.
"ಈ ಸಂಖ್ಯೆ ಚಾಲ್ತಿಯಲ್ಲಿರಲಿಲ್ಲ ಎನ್ನುವುದು ಏಕನಾಥ ಖಡ್ಸೆಯವರ ಸಮರ್ಥನೆ. ಆದರೆ ಅವರ ಮೊಬೈಲ್ ಸಂಖ್ಯೆ 9423073667ಗೆ ದಾವೂದ್ ಇಬ್ರಾಹಿಂ ಅವರ ಪತ್ನಿ ಮೆಹಜಬೀನ್ ಶೇಖ್ ಅವರ 021-35971639 ಸಂಖ್ಯೆಯಿಂದ 2015 ಸೆಪ್ಟೆಂಬರ್ 4ರಿಂದ 2016ರ ಏಪ್ರಿಲ್ 5ರವರೆಗೆ ನಿಯತವಾಗಿ ಕರೆ ಮಾಡಲಾಗಿದೆ" ಎಂದು ದಾಖಲೆ ಸಹಿತ ಬಹಿರಂಗಪಡಿಸಿದರು.