ಜಿಶಾ ಕೊಲೆ ಪ್ರಕರಣ: ರೇಖಾ ಚಿತ್ರಕ್ಕೆ ಹೋಲುವ ರಾಜಸ್ಥಾನಿಯ ಬಂಧನ
ತೃಶೂರ್, ಜೂನ್ 4: ಪೆರುಂಬಾವೂರಿನಲ್ಲಿ ನಡೆದಿದ್ದ ಜಿಶಾ ಕೊಲೆಪ್ರಕರಣದಲ್ಲಿ ಅರೋಪಿಯದೆನ್ನಲಾದ ರೇಖಾಚಿತ್ರಕ್ಕೆ ಹೋಲುವ ವ್ಯಕ್ತಿಯೊಬ್ಬನನ್ನು ತೃಶೂರು ಸಮೀಪದ ಪೇರಾಮಂಗಲದಲ್ಲಿ ಪೊಲೀಸರು ಕಸ್ಟಡಿಗೆ ಪಡೆದು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ರಾಜಸ್ಥಾನದ ರಜನೀಷ್(20)ನನ್ನು ಶುಕ್ರವಾರ ಪೇರಾಮಂಗಲ ಪೊಲೀಸರು ಬಂಧಿಸಿದ್ದರು. ಟೈಲ್ಸ್ ಕೆಲಸಗಾರನಾದ ಈತನನ್ನು ಪೊಲೀಸರ ವಿಶೇಷ ತಂಡ ಪ್ರಶ್ನಿಸಿದ್ದು ಬೆರಳಚ್ಚು ಮತ್ತು ಇತರ ಅಗತ್ಯ ವಿವರಗಳನ್ನು ಸಂಗ್ರಹಿಸಿ ಕರೆದಾಗ ಹಾಜರಾಗಬೇಕೆಂಬ ನಿಬಂಧನೆಯಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.
ಆರೋಪಿಯದೆನ್ನಲಾಗುವ ರೇಖಾ ಚಿತ್ರಕ್ಕೂ ಈತನಿಗೂ ಹೋಲಿಕೆ ಇದ್ದುದರಿಂದ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಆನಂತರ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು. ಈತನಿಗೂ ರೇಖಾ ಚಿತ್ರಕ್ಕೂ ಹೋಲಿಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವಾರದ ಹಿಂದೆ ಈತ ಟೈಲ್ಸ್ ಕೆಲಸಕ್ಕೆ ಬಂದಿದ್ದು. ಇದಕ್ಕಿಂತ ಮೊದಲು ಬೇರೆ ಕಡೆಯೂ ಕೆಲಸ ಮಾಡಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಪೇರಮಂಗಲ ಪೊಲೀಸರು ಕಸ್ಟಡಿಗೆ ಪಡೆದ ಬಳಿಕ ವಿಶೇಷ ಪೊಲೀಸ್ ತಂಡ ಬಂದು ಆತನನ್ನು ಪ್ರಶ್ನಿಸಿದ್ದು ನಂತರ ಜಮೀನಿನಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು. ಬೆರಳಚ್ಚು ಡಿಎನ್ ಎ ಪರೀಕ್ಷೆ ನಡೆಸಲಾಗುವುದು ಮತ್ತು ಮೊಬೈಲ್ ಲೊಕೇಶನ್ ಮಾಹಿತಿಗಳನ್ನೂ ಪೊಲೀಸರು ಕಲೆಹಾಕಿದ್ದಾರೆ.