ಬಿಜೆಪಿ- ಶಿವಸೇನೆ ತಿಕ್ಕಾಟ ತಾರಕಕ್ಕೆ
ಮುಂಬೈ, ಜೂ.24: ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಬಿಜೆಪಿ ವಕ್ತಾರ, ಪಕ್ಷಕ್ಕೆ ನಿಷ್ಠವಾಗಿರುವ ರಾವುತ್ ಸಾಹಿಬ್, ಪತ್ರಿಕೆಯೊಂದರಲ್ಲಿ ‘ವಿಚ್ಛೇದನಕ್ಕೆ ಯಾವಾಗ ಮುಹೂರ್ತ ಇಟ್ಟಿದ್ದೀರಿ?’ ಎಂಬ ಶೀರ್ಷಿಕೆಯ ಲೇಖನ ಬರೆದಿದ್ದಾರೆ.
ಶಿವಸೇನೆಯ ಸಂಸದ ಹಾಗೂ ‘ಸಾಮ್ನಾ’ದ ಕಾರ್ಯನಿರ್ವಾಹಕ ಸಂಪಾದಕ ಸಂಜಯ ರಾವುತ್ ಅವರು ತಮ್ಮ ಪತ್ರಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರವನ್ನು ಟೀಕಿಸುವ ಸರಣಿ ಸಂಪಾದಕೀಯಗಳನ್ನು ಬರೆದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ವೈಮನಸ್ಯ ಹೆಚ್ಚಿತ್ತು. ರಾಜ್ಯ ಬಿಜೆಪಿ ವಕ್ತಾರ ಮಾಧವ ಭಂಡಾರಿಯವರು ದ್ವೈಮಾಸಿಕ, ಮನೋಗತ್ನಲ್ಲಿ ಇದಕ್ಕೆ ವಿರುದ್ಧವಾಗಿ ಲೇಖನ ಬರೆದಿದ್ದಾರೆ. ಶಿವಸೇನೆಗಾಗಿ ಬಿಜೆಪಿ ಸಾಕಷ್ಟು ತ್ಯಾಗ ಮಾಡಿದ್ದರೂ, ಶಿವಸೇನೆಗೆ ಕೃತಜ್ಞತೆ ಇಲ್ಲ ಎಂದು ಟೀಕಿಸಿದ್ದಾರೆ.
ರಾವೂತ್ ಔರಂಗಾಬಾದ್ನಲ್ಲಿ ಕೇಂದ್ರ ಸರಕಾರವನ್ನು ನಿಜಾಮರ ಆಡಳಿತಕ್ಕೆ ಹೋಲಿಸಿದ್ದರು. ಈ ಬಗ್ಗೆ ಉಲ್ಲೇಖಿಸಿದ ಭಂಡಾರಿ, ನಿಜಾಮರು ನೀಡಿದ ಪ್ಲೇಟ್ನಲ್ಲಿ ಶಿವಸೇನೆ ಬಿರಿಯಾನಿ ತಿನ್ನುತ್ತಿದೆ ಎಂದು ಕುಟುಕಿದ್ದಾರೆ. ಕಳೆದ ಎಲ್ಲ ಚುನಾವಣೆಗಳಲ್ಲಿ ಶಿವಸೇನೆಗಿಂತ ನಮ್ಮ ಸಾಧನೆ ಉತ್ತಮವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.