ಗುಜರಾತ್ ಭೇಟಿ ರದ್ದುಪಡಿಸಿದ ಕೇಜ್ರಿವಾಲ್
ಹೊಸದಿಲ್ಲಿ,ಜೂ.29: ತಾನು ಆಯ್ಕೆ ಮಾಡಿದ ಸ್ಥಳದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ರಾಜ್ಯ ಸರಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮುಂಬರುವ ಗುಜರಾತ್ ಭೇಟಿಯನ್ನು ರದ್ದುಪಡಿಸಿದ್ದಾರೆ.
ಪಂಜಾಬ್ ಹಾಗೂ ಗೋವಾ ರಾಜ್ಯದ ಜೊತೆಗೆ ಗುಜರಾತ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಎಪಿ ಈಗಾಗಲೇ ಘೋಷಿಸಿದೆ. ಚುನಾವಣಾ ಪ್ರಚಾರಕ್ಕೆ ಪಕ್ಷವನ್ನು ಸಜ್ಜುಗೊಳಿಸಲು ಜೂನ್ಗೆ ಗುಜರಾತ್ಗೆ ಭೇಟಿ ನೀಡಲು ಕೇಜ್ರಿವಾಲ್ ನಿರ್ಧರಿಸಿದ್ದರು. ಕೇಜ್ರಿವಾಲ್ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತನಾಡುವ ಕಾರ್ಯಕ್ರಮವೂ ಇತ್ತು ಎನ್ನಲಾಗಿದೆ.
ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದೆ. ಪ್ರಸ್ತುತ ಗುಜರಾತ್ನಲ್ಲಿ ಆನಂದಿ ಬೆನ್ ಪಟೇಲ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ.
ಗುಜರಾತ್ನಲ್ಲಿ ಪಾಟಿದಾರ್ಗೆ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ಗೆ ಎಎಪಿ ತನ್ನ ಬೆಂಬಲ ಘೋಷಿಸಿದೆ.