ಐಸ್ಕ್ರೀಂನ ಹಣ ಕೇಳಿದ್ದಕ್ಕೆ ವ್ಯಾಪಾರಿಯನ್ನು ಹೊಡೆದು ಕೊಂದ ಯುವಕರು
ಗಾಝಿಯಾಬಾದ್,ಜುಲೈ 3: ಐಸ್ಕ್ರೀಂ ತಿಂದ ಹಣವನ್ನು ಕೇಳಿದ ಐಸ್ಕ್ರೀಂ ವ್ಯಾಪಾರಿಯನ್ನು ಯುವಕರು ಹೊಡೆದು ಕೊಂದುಹಾಕಿದ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಗಾಝಿಯಾಬಾದ್ನ ಮಹಾರಾಜಪುರದಲ್ಲಿ ನಡೆದಿದೆ. ಹತ್ಯೆಯಾದ ದುರ್ದೈವಿಯನ್ನು ಐಸ್ಕ್ರೀಮ್ ವ್ಯಾಪಾರಿ ಮುಹಮ್ಮದ್ ಇಸ್ಲಾಂ(24) ಎಂದು ಗುರುತಿಸಲಾಗಿದೆ.
ಬಿಹಾರದ ಸಹರ್ಸಾದವನಾದ ಮುಹಮ್ಮದ್ ಕುಟುಂಬಸಹಿತ ಮಹಾರಾಜಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇವನಿಗೆ ಒಂದೂವರೆ ಮತ್ತು ಎರಡೂವರೆ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಸಹೋದರ ಮುಬಾರಕ್(30) ಸೈಕಲ್ ರಿಪೇರಿ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾನೆ. ಸ್ಥಳೀಯ ಯುವಕರ ಒಂದು ಗುಂಪು ಯಾವಾಲೂ ಮುಹಮ್ಮದ್ನಿಂದ ಐಸ್ಕ್ರೀಂ ತಿನ್ನುತ್ತಿದ್ದರು. ಆದರೆ ಒಮ್ಮೆಯೂ ಹಣ ಕೊಡಲಿಲ್ಲ. ಶುಕ್ರವಾರ ಮಧ್ಯಾಹ್ನ ಹಣಕೊಡುತ್ತೇವೆ ಎಂದು ಕರೆಯಿಸಿಕೊಂಡು ಮುಹಮ್ಮದ್ಗೆ ಇವರು ಮಾರಣಾಂತಿಕವಾಗಿ ಥಳಿಸಿಕೊಂದು ಹಾಕಿದ್ದಾರೆ ಎಂದು ಅಣ್ಣ ಮುಬಾರಕ್ ಹೇಳಿದ್ದಾರೆ.
ಬಾಕಿ ಹಣವನ್ನು ಕೊಡುತ್ತೇವೆಂದು ಮುಹಮ್ಮದ್ನನ್ನು ಕರೆಯಿಸಿಕೊಂಡ ಅವರು ಮೊದಲು ಐಸ್ಕ್ರೀಂ ತಿಂದರು ನಂತರ ಹಣಕೊಡದೆ ಗಲಾಟೆ ಮಾಡಿ ಹೊಡೆದರು. ಮುಹಮ್ಮದ್ ನೆಲಕ್ಕುರುಳಿದ್ದನ್ನು ಕಂಡು ಇಮ್ರಾನ್ ಮತ್ತು ಅವನ ತಂದೆ ಮೂಮಿನ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಮುಹಮ್ಮದ್ ಮೃತನಾಗಿದ್ದ. ಆನಂತರ ಮೂಮಿನ್ ಇಮ್ರಾನ್ ಮುಹಮ್ಮದ್ನ ಮೃತದೇಹವನ್ನು ತಂದು ಮನೆಯ ಮುಂದೆ ಹಾಕಿ ಹೋಗಿದ್ದಾರೆ ಎಂದು ಮುಹಮ್ಮದ್ನ ಸಂಬಂಧಿಕಳಾದ ಆಶು(32)ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಗಾಝಿಯಾಬಾದ್ ಪೊಲೀಸರು ಮುಹಮ್ಮದ್ನನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ರಾಷಿದ್ ಎಂಬಾತನನ್ನು ಬಂದಿಸಿದ್ದಾರೆ.ರಾಷಿದ್ ಗಲಾಟೆ ಆರಂಭಿಸಿ ಹೊಡೆದವನೆಂದು ಪೊಲೀಸರು ಹೇಳಿದ್ದಾರೆ. ಇಮ್ರಾನ್ ಮತ್ತು ಮೂಮಿನ್ನನ್ನೂ ಎಫ್ಐಆರ್ನಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.