ಶ್ರೀನಗರದಲ್ಲಿ ಗೀಲಾನಿ ಬಂಧನ: ಹಿಂಸಾಚಾರದಲ್ಲಿ 34 ಮಂದಿ ಬಲಿ

Update: 2016-07-13 15:13 GMT

ಶ್ರೀನಗರ, ಜು.13: ಕಳೆದ 1931ರಲ್ಲಿ ನಡೆದಿದ್ದ ಜನತಾ ಬಂಡಾಯದಲ್ಲಿ ಮೃತರಾಗಿದ್ದ 21 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೆರವಣಿಗೆಯೊಂದರಲ್ಲಿ ನೇತೃತ್ವ ವಹಿಸಲು ಶ್ರೀನಗರದ ತನ್ನ ನಿವಾಸದಿಂದ ಹೊರಬಂದಿದ್ದ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಸೈಯದ್ ಅಲಿ ಗೀಲಾನಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಸಾವಿರಾರು ಜನರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯನ್ನು ಅನಿರ್ದಿಷ್ಟಾವಧಿ ಗೃಹ ಬಂಧನದಲ್ಲಿರಿಸಲಾಗಿರುವ ಪ್ರತ್ಯೇಕತಾವಾದಿ ನಾಯಕ ಖಂಡಿಸಿದ್ದಾರೆ.

ಇದು ಭದ್ರತಾ ಪಡೆಗಳ ಬರ್ಬರ ಕೃತ್ಯವಾಗಿದೆ. ಭಾರತ ಕೇವಲ ಕಾಶ್ಮೀರದ ನೆಲವನ್ನು ಬಯಸುತ್ತಿದೆ ಹಾಗೂ ಇಲ್ಲಿನ ಜನತೆಯನ್ನು ವ್ಯವಸ್ಥಿತವಾಗಿ ಕೊಲ್ಲಬಯಸಿದೆಯೆಂಬುದು ಸ್ಪಷ್ಟವೆಂದು ಅವರು ಆರೋಪಿಸಿದ್ದಾರೆ.

ಕಣಿವೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಹಿಂಚಾಚಾರದಲ್ಲಿ 34 ಮಂದಿ ಮೃತರಾಗಿದ್ದು, 1,300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕರು ಮಕ್ಕಳು ಹಾಗೂ ಯುವಕರಾಗಿದ್ದಾರೆ.

ಪ್ರತಿಭಟನಕಾರರನ್ನು ಚದುರಿಸಲು ಭದ್ರತಾಪಡೆಗಳು ಅತಿರೇಕ ಬಲವನ್ನು ಉಪಯೋಗಿಸುತ್ತಿವೆಯೆಂದು ಕಾರ್ಯಕರ್ತರು ಹಾಗೂ ಸ್ಥಳೀಯರು ಆರೋಪಿಸಿದ್ದರೆ, ತಾವು ಗರಿಷ್ಠ ಸಂಯಮ ತೋರಿಸುತ್ತಿದ್ದೇವೆಂದು ಭದ್ರತಾ ಪಡೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News