ಕರ್ಫ್ಯೂ ಲೆಕ್ಕಿಸದೇ ಕಾಶ್ಮೀರಿ ಪಂಡಿತ ಮಹಿಳೆಯ ಅಂತಿಮ ಸಂಸ್ಕಾರ ನೇರವೇರಿಸಿದ ಮುಸ್ಲಿಮರು
Update: 2016-07-17 04:11 GMT
ಶ್ರೀನಗರ, ಜು.17: ಪ್ರಕ್ಷುಬ್ಧ ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಮರು ಕರ್ಫ್ಯೂ ಉಲ್ಲಂಘಿಸಿ ಕಾಶ್ಮೀರಿ ಪಂಡಿತ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನೆರವೇರಿಸಲು ನೆರವಾಗುವ ಮೂಲಕ ಸ್ನೇಹಪರತೆ ಮೆರೆದ ಘಟನೆ ಶನಿವಾರ ನಡೆದಿದೆ.
ಶನಿವಾರ ಮುಂಜಾನೆ ಮೃತಪಟ್ಟ ದೀಪಕ್ ಮಲ್ಹೋತ್ರಾ ಅವರ ತಾಯಿಯ ಅಂತಿಮ ಸಂಸ್ಕಾರಗಳನ್ನು ವಿಧ್ಯುಕ್ತವಾಗಿ ನೆರವೇರಿಸಲು ಮಹಾರಾಜ್ ಗಂಜ್ ನ ಶೇಕ್ ಮೊಹಲ್ಲಾದ ನಿವಾಸಿಗಳು ಮಲ್ಹೋತ್ರಾ ಕುಟುಂಬದ ನೆರವಿಗೆ ಬಂದರು. ಸ್ಥಳೀಯ ಮುಸ್ಲಿಮರೇ ಮೃತದೇಹವನ್ನು ಸ್ಮಶಾನದವರೆಗೂ ಒಯ್ದು ಮಾನವೀಯತೆ ಮೆರೆದರು ಎಂದು ಪೊಲೀಸರು ವಿವರಿಸಿದ್ದಾರೆ.
1990ರ ದಶಕದಲ್ಲಿ ಕಣಿವೆಯಲ್ಲಿ ಭಯೋತ್ಪಾದನೆ ಹೆಚ್ಚಿದರೂ, ಮಲ್ಹೋತ್ರಾ ಕುಟುಂಬ ಇಲ್ಲಿಂದ ವಲಸೆ ಹೋಗಿರಲಿಲ್ಲ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಪ್ರದೇಶದಾದ್ಯಂತ ಒಂದು ವಾರದಿಂದ ಕರ್ಫ್ಯೂ ಜಾರಿಯಲ್ಲಿದೆ.