ಸರ್ದಾರ್ ಸರೋವರ ಜಲಾಶಯ ಪೂರ್ಣವಾಗಿ ತುಂಬಿಸುವ ವಿರುದ್ಧ ಪ್ರತಿಭಟನೆಗೆ ಪಾಟ್ಕರ್ ಸಜ್ಜು

Update: 2016-07-30 17:17 GMT

ಇಂದೋರ್, ಜು.30: ಸರ್ದಾರ್ ಸರೋವರ ಜಲಾಶಯವನ್ನು ಅದರ ಸಂಪೂರ್ಣ ಮಟ್ಟಕ್ಕೆ ತುಂಬಿಸುವ ಗುಜರಾತ್ ಸರಕಾರದ ಉದ್ದೇಶಿತ ಯೋಜನೆಯ ವಿರುದ್ಧ ರವಿವಾರದಿಂದ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ರಾಜಘಾಟ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸುವುದಾಗಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರು ಇಂದಿಲ್ಲಿ ಪ್ರಕಟಿಸಿದರು.

ಗುಜರಾತ್‌ನಲ್ಲಿ ನರ್ಮದಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಈ ಜಲಾಶಯದಲ್ಲಿ ಸಂಪೂರ್ಣ ಮಟ್ಟದಲ್ಲಿ ನೀರು ತುಂಬಿಸಿದರೆ 45,000 ಕುಟುಂಬಗಳು ಸಂಕಷ್ಟಕ್ಕೊಳಗಾಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಸರ್ದಾರ್ ಸರೋವರ ಜಲಾಶಯದಲ್ಲಿ ಈಗಾಗಲೇ 122 ಮೀ.ಗೂ ಹೆಚ್ಚಿನ ನೀರಿದೆ. ಆದರೆ ಈ ಮಟ್ಟವನ್ನು 139 ಮೀ.ಗೇರಿಸಲು ಜಲಾಶಯದ ತೂಬುಗಳನ್ನು ಮುಚ್ಚಲು ಸರಕಾರವು ಬಯಸಿದೆ. ಹಾಗೇನಾದರೂ ಆದರೆ ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿಯ ಸುಮಾರು 45,000 ಕುಟುಂಬಗಳು ಮುಳುಗಡೆಯ ಸಮಸ್ಯೆಯನ್ನು ಎದುರಿಸಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News