ಆಮಿರ್ ಖಾನ್ ಹೇಳಿಕೆ ಮತ್ತೆ ಕೆಣಕಿದ ಪರಿಕ್ಕರ್
ಪುಣೆ, ಜು.31: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಿನ್ನೆಲೆಯಲ್ಲಿ ತಾವು ಹಾಗೂ ಪತ್ನಿ ದೇಶ ತೊರೆಯುವ ನಿರ್ಧಾರಕ್ಕೆ ಮುಂದಾಗಿರುವುದಾಗಿ ಬಾಲಿವುಡ್ ನಟ ಅಮೀರ್ ಖಾನ್ ನೀಡಿದ್ದ ಹೇಳಿಕೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತೆ ಕೆದಕಿದ್ದಾರೆ. ಅಮೀರ್ ಈ ಹೇಳಿಕೆ ಉದ್ದಟತನದ್ದು ಎಂದು ಪರಿಕ್ಕರ್ ಟೀಕಿಸಿದ್ದಾರೆ.
ಪತ್ರಕರ್ತ, ನಟ ನಿತಿನ್ ಗೋಖಲೆಯವರ ಸಿಯಾಚಿನ್ ಕೃತಿಯ ಮರಾಠಿ ಅವತರಣಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ಒಬ್ಬ ನಟ ಪತ್ನಿಯೊಂದಿಗೆ ದೇಶ ತೊರೆಯಲು ಇಚ್ಛಿಸಿರುವುದಾಗಿ ಹೇಳಿಕೆ ನಿಡಿದ್ದರು. ಇದು ಉದ್ಧಟತನದ ಹೇಳಿಕೆ. ನಾನು ಬಡವನಾಗಿದ್ದು, ನನ್ನ ಮನೆ ಚಿಕ್ಕದಾಗಿದ್ದರೂ ಕೂಡಾ ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ ಮತ್ತು ಅದರಿಂದ ಬಂಗಲೆ ನಿರ್ಮಿಸಿಕೊಳ್ಳುವ ಕನಸು ಕಾಣುತ್ತೇನೆ" ಎಂದು ಖಾನ್ ಹೆಸರು ಪ್ರಸ್ತಾವಿಸದೇ ಉಲ್ಲೇಖಿಸಿದರು. ಕಳೆದ ನವೆಂಬರ್ ನಲ್ಲಿ ಖಾನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಆ ನಟ ಇಂಥ ಹೇಳಿಕೆ ನೀಡಿದಾಗ ಹಲವು ಮಂದಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಅವರು ರಾಯಭಾರಿಯಾಗಿರುವ ಆನ್ಲೈನ್ ಶಾಪಿಂಗ್ ಆಪ್ ಅನ್ನು ಕಿತ್ತುಹಾಕಿದರು. ಇದರಿಂದ ಸಹಜವಾಗಿಯೇ ಆ ಸಂಸ್ಥೆ ನಟನ ಜಾಹೀರಾತು ಹಿಂದಕ್ಕೆ ಪಡೆಯಿತು ಎಂದು ಪರಿಕ್ಕರ್ ವಿವರಿಸಿದರು.
ಜೆಎನ್ಯು ರಾಷ್ಟ್ರವಿರೋಧಿ ಹೇಳಿಕೆ ವಿವಾದದ ಬಗ್ಗೆ ಪ್ರಸ್ತಾಪಿಸಿ, ಇಂಥ ಹೇಳಿಕೆ ನೀಡುವವರಿಗೆ ಜನರೇ ಬುದ್ಧಿ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.