ಮನೆ ಅಡವಿಟ್ಟು ವಿಶ್ವ ಚಾಂಪಿಯನ್ ಗಳನ್ನು ತಯಾರಿಸುವ ಅಕಾಡೆಮಿ ರೂಪಿಸಿದ ಪುಲ್ಲೇಲ ಗೋಪಿಚಂದ್

Update: 2016-08-20 07:17 GMT

ಹೈದರಾಬಾದ್, ಆ.20: ಭಾರತ ಬ್ಯಾಡ್ಮಿಂಟನ್ ಕ್ಷೇತ್ರದ ಧ್ರುವತಾರೆಯಾಗಿ ಮಿನುಗುತ್ತಿರುವ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರ ಹಿಂದಿನ ಪ್ರೇರಕ ಶಕ್ತಿ ಆಕೆಯ ಕೋಚ್ ಹೈದರಾಬಾದಿನ ಫುಲ್ಲೇಲ ಗೋಪಿಚಂದ್ ಅಕಾಡೆಮಿಯ ಮುಖ್ಯಸ್ಥ ಪಿ. ಗೋಪಿಚಂದ್ ಎಂಬುದು ನಿರ್ವಿವಾದಿತ. ಸಿಂಧು ಮಾತ್ರವಲ್ಲದೆ ಸೈನಾ ನೆಹ್ವಾಲ್ ಸಹಿತ ಭಾರತದ ಸ್ಟಾರ್ ಶಟ್ಲರ್ ಗಳ ಯಶಸ್ಸು ಹಾಗೂ ಚೀನೀ ಆಟಗಾರರ ಬಗೆಗೆ ಅವರಿಗಿದ್ದ ಭಯವನ್ನು ದೂರ ಮಾಡಿದವರೇ ಅಪ್ರತಿಮ ಬ್ಯಾಡ್ಮಿಂಟನ್ ಕೋಚ್ ವಿ.ಗೋಪಿಚಂದ್. ಒಂದು ವಿಧದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಪಟುಗಳಿಗೆ ಅವರು ಗಾಡ್ ಫಾದರ್ ಇದ್ದಂತೆ. 2001 ರ ಆಲ್ ಇಂಡಿಯನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಡ ಗೆದ್ದಿದ್ದ ಅವರ ಅಕಾಡೆಮಿ ವಿಶ್ವ ದರ್ಜೆಯ ಆಟಗಾರರನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

2003 ರಲ್ಲಿ ಅವರು ತಮ್ಮ ಸ್ಪೋರ್ಟ್ಸ್ ಅಕಾಡೆಮಿಯನ್ನು ಸ್ಥಾಪಿಸುವ ಸಲುವಾಗಿ ತಮ್ಮ ಕುಟುಂಬದ ಆಸ್ತಿಯೆಲ್ಲವನ್ನೂ ಅಡವಿಟ್ಟಿದ್ದರೆಂಬುದನ್ನು ಅವರು ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಬೆಳ್ಳಂಬೆಳಗ್ಗೆ ಅವರ ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಆರಂಭವಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಬೆಳಗ್ಗೆ 4:30 ಕ್ಕೆ ತಮ್ಮ ಪ್ರಾಕ್ಟೀಸ್ ಆರಂಭಿಸುತ್ತಿದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ 6 ಗಂಟೆಯ ಶಿಫ್ಟ್ ಗೆ ಆಗಮಿಸುತ್ತಿದ್ದರು. ‘‘ ಗೋಪಿಚಂದ್ ಅವರು ಯಾವತ್ತೂ ಬೆಳಗ್ಗೆ 4:15 ಕ್ಕೆ ಎಲ್ಲರಿಗಿಂತಲೂ ಮೊದಲು ಕೋರ್ಟ್ ನಲ್ಲಿರುತ್ತಾರೆ ಹಾಗೂ ತಮ್ಮ ಕೊನೆಯ ವಿದ್ಯಾರ್ಥಿ ಸಂಜೆ ಅಲ್ಲಿಂದ ತೆರಳುವ ತನಕ ಅಲ್ಲಿಯೇ ಇರುತ್ತಾರೆ. ಅಲ್ಲಿರುವ ಎಲ್ಲಾ 50 ತರಬೇತು ಪಡೆಯುವವರಿಗೂ ಸಮಾನ ಗಮನವನ್ನು ಗೋಪಿ ಸರ್ ನೀಡುತ್ತಾರೆ,’’ ಎಂದು ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ವಿವರಿಸುತ್ತಾರೆ.

ಹೈದರಾಬಾದಿನ ಅತ್ಯಂತ ಜನ ನಿಬಿಡ ಗಚಿಬಾವ್ಲಿ ಪ್ರದೇಶದಲ್ಲಿರುವ ಅವರ ಈ ಅಕಾಡೆಮಿ ಹಲವು ಪ್ರತಿಭಾವಂತ ಆಟಗಾರರನ್ನು ಸೃಷ್ಟಿಸಿದೆ. ಸಿಂಧು ಅವರಿಗಿಂತ ಮೊದಲು ಈ ಅಕಾಡೆಮಿಯ ಅತ್ಯುನ್ನತ ಆಟಗಾರ್ತಿಯಾಗಿ ಹೊರ ಹೊಮ್ಮಿದವರು ಸೈನಾ ನೆಹ್ವಾಲ್. ಆದರೆ 2012 ಲಂಡನ್ ಒಲಿಂಪಿಕ್ಸ್ ಮೊದಲು ಅವರಿಬ್ಬರು ದೂರವಾಗಿದ್ದರು.

2001 ರಲ್ಲಿ ತಮ್ಮ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆಲುವಿನ ನಂತರ ಹೈದರಾಬಾದ್ ನಲ್ಲಿ ಅಕಾಡೆಮಿ ಸ್ಥಾಪಿಸಬೇಕೆಂಬ ಕನಸನ್ನು ಅವರು ಕಂಡಿದ್ದರು. ಹರ್ಯಾಣ ಮೂಲದ ಸೈನಾ ತನ್ನ ಹೆತ್ತವರೊಂದಿಗೆ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತು ಪಡೆಯಲು ತಮ್ಮ ತವರೂರಿನಿಂದ ಹೈದರಾಬಾದ್ ಗೆ ವಲಸೆ ಬಂದಿದ್ದು ಈಗ ಇತಿಹಾಸ.

ಈಗ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆಯಾಗಿರುವ ಸಿಂಧು ಅವರು ಹೈದರಾಬಾದ್ ನಗರದ ಹಲವಾರು ಫ್ಲೈ ಓವರ್ ಗಳನ್ನು ದಾಟಿ ದಿನಕ್ಕೆ 30 ಕಿಮಿ ಪ್ರಯಾಣಿಸಿ ಅಕಾಡೆಮಿಗೆ ಬಂದು ತರಬೇತಿ ಪಡೆಯುತ್ತದರು. ‘‘ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ನನ್ನ ತಂದೆ ನನ್ನನ್ನು ಈ ಅಕಾಡೆಮಿಗೆ ಬೆಳ್ಳಂಬೆಳಗ್ಗೆ ಕರೆ ತಂದು ನಂತರ ಶಾಲೆಗೆ ಬಿಟ್ಟು ಹಾಗೂ ಸಂಜೆ ಮತ್ತೆ ತರಬೇತಿಗೆ ಕರೆದುಕೊಂಡು ಬರುತ್ತಿದ್ದರು,’’ ಎಂದು ಸಿಂಧು ನೆನಪಿಸುತ್ತಾರೆ.

ಗೋಪಿಚಂದ್ ಅವರ ಖ್ಯಾತಿಯಿಂದಾಗಿಯೇ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೈತ ಕೆ.ವಿ.ಎಸ್. ಕೃಷ್ಣ ಹಾಗೂ ಅವರ ಪತ್ನಿ ರಾಧಾ ತಮ್ಮಿಬ್ಬರು ಪುತ್ರರಾದ ಶ್ರೀಕಾಂತ್ ಹಾಗೂ ನಂದಗೋಪಾಲ್ ಅವರನ್ನು ಗೋಪಿಚಂದ್ ಅಕಾಡೆಮಿಗೆ ಸೇರಿಸಿದ್ದರು. ಅವರಿಬ್ಬರಲ್ಲಿ ಕಿರಿಯ ಸಹೋದರನಾದ ಶ್ರೀಕಾಂತ್ ಮುಂದೆ ಭಾರತದ ಅಗ್ರ ಶ್ರೇಣಿಯ ಬ್ಯಾಡ್ಮಿಂಟನ್ ಆಟಗಾರನಾಗಿ ಹೊರಹೊಮ್ಮಿದ್ದರು.

ಗೋಪಿಚಂದ್ ಅವರ ಅಕಾಡೆಮಿಯಲ್ಲಿಯೇ ಉಳಿದು ತರಬೇತಿ ಹೊಂದುವ ಆಟಗಾರರು ಸಂಜೆ ಹೊತ್ತು ಹೊರ ಹೋಗುವ ಪರಿಪಾಠವಿಟ್ಟುಕೊಂಡಿಲ್ಲ. ಅದಕ್ಕೆ ಕಾರಣವೂ ಇತ್ತು ಅವರೇನಾದರೂ ತಿರುಗಾಡಿಕೊಂಡು ಬರಲು ಹೋದರೆ ಮತ್ತೆ ಬೆಳಗ್ಗಿನ ತರಬೇತಿಗೆ ಹಾಜರಾಗುವುದು ಕಷ್ಟವಾಗಿತ್ತು.

ಅವರಿಗೆ ಅಂತರ್ಜಾಲ ಸಂಪರ್ಕ ನೀಡಲಾಗುವುದಿಲ್ಲ ಹಾಗೂ ಮೊಬೈಲ್ ಫೋನುಗಳ ಮುಖಾಂತರ ಕರೆ ಮಾಡುವ ಅವಕಾಶ ಕೇವಲ ರವಿವಾರಗಳಂದು ಮಾತ್ರ ನೀಡಲಾಗುತ್ತದೆ. ಅಕಾಡೆಮಿಯ 16 ಕೊಠಡಿಗಳು ಹಾಗೂ ಮೂರು ಡಾರ್ಮೆಟರಿಗಳನ್ನು ಹೊರತುಪಡಿಸಿ ಅಕಾಡೆಮಿಯ ಎಲ್ಲಾ ಪ್ರದೇಶಗಳಲ್ಲೂ ಸಿಸಿಟಿವಿ ಕಣ್ಗಾವಲು ಇದೆ.

‘‘ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಬದ್ಧತೆ ಮತ್ತು ಶಿಸ್ತು ಅತ್ಯಗತ್ಯ. ಇಲ್ಲಿ ಯಾವುದೇ ಸುಲಭದ ಹಾದಿಯಿಲ್ಲ. ಕಷ್ಟ ಪಟ್ಟು ತರಬೇತಿ ಪಡೆಯುವುದು ಮುಖ್ಯವಾಗಿದೆ,’’ ಎಂದು ಹೇಳುತ್ತಾರೆ ಗೋಪಿಚಂದ್.

42 ರ ಹರೆಯದಲ್ಲೂ ಅವರನ್ನು ಹುರಿದುಂಬಿಸುವ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು. ‘‘ನನಗೆ ನಿಜವಾಗಿಯೂ ಗೊತ್ತಿಲ್ಲ. ಪ್ರತಿ ದಿನ ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂದು ನನಗನಿಸುತ್ತದೆ. ಒಲಿಂಪಿಕ್ಸ್ ನಲ್ಲಿ ಭಾರತದ ರಾಷ್ಟ್ರ ಗೀತೆ ನುಡಿಸಲಾಗುತ್ತಿದೆಯೆಂಬುದೇ ದೊಡ್ಡ ಸಂಗತಿ. ಇದಕ್ಕಿಂತಲೂ ಹೆಚ್ಚಿನ ಸ್ಫೂರ್ತಿ ಬೇರೇನೂ ಬೇಕಾಗಿಲ್ಲ,’’ಎನ್ನುತ್ತಾರವರು.

ಗೋಪಿಚಂದ್ ಚಿಕ್ಕವರಿದ್ದಾಗ ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕೆಂಬ ಒತ್ತಡ ಅವರಿಗೆ ಇರಲಿಲ್ಲವೆಂದು ಅವರು ನೆನಪಿಸಿಕೊಳ್ಳುತ್ತಾರೆ. ಅವರ ತಾಯಿ ಅವರನ್ನು ಕ್ರೀಡಾ ಕ್ಷೇತದಲ್ಲಿ ಮುಂದುವರಿಯಲು ಹುರಿದುಂಬಿಸಿದ್ದರು. ಅವರ ವಯಸ್ಸಿನ ಇತರ ಹದಿಹರೆಯದವರಂತೆ ಅವರು ಕೂಡ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದರೂ ಉತ್ತೀರ್ಣರಾಗಿರಲಿಲ್ಲ. ‘‘ನಾನು ತೇರ್ಗಡೆಯಾಗುತ್ತಿದ್ದರೆ ನನ್ನ ಬದುಕಿನ ದಿಕ್ಕೇ ಬದಲಾಗುತ್ತಿತ್ತು,’’ಎನ್ನುತ್ತಾರೆ ಗೋಪಿಚಂದ್. ಆಗ ಅವರಿಗೆ ರಜನೀಕಾಂತ್ ಚಿತ್ರಗಳೆಂದರೆ ಪಂಚಪ್ರಾಣವಾಗಿತ್ತು. ಅವರು ರಜನೀಕಾಂತ್ ಅವರಂತೆಯೇ ಮೀಸೆ ಕೂಡ ಇಟ್ಟುಕೊಂಡಿದ್ದರು.

1994 ರಲ್ಲಿ ಡಬಲ್ಸ್ ಮ್ಯಾಚ್ ಆಡುವಾಗ ಅವರ ಮೊಣಕಾಲಿಗಾದ ಗಾಯದಿಂದಾಗಿ ಅವರು ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು ಹಾಗೂ ಸುಮಾರು ಒಂದು ವರ್ಷದ ತನಕ ನಡೆಯಲು ಅವರಿಗೆ ಅಸಾಧ್ಯವಾಗಿತ್ತು. ಮುಂದೆ ಯೋಗಾಭ್ಯಾಸದಿಂದ ಅವರು ಮತ್ತೆ ಎಂದಿನಂತೆ ನಡೆಯಲು ಶಕ್ತವಾಗಿದ್ದರು.

‘‘ನನ್ನ 27ನೇ ಹರೆಯದಲ್ಲಿ ನಾನು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದೆ. ನಾನು ಸ್ಪರ್ಧಿಸುವುದನ್ನು ನಿಲ್ಲಿಸಿದರೂ ಕಿರಿಯ ಆಟಗಾರರಿಗೆ ಏನಾದರೂ ಮಾಡಬೇಕೆಂಬ ಹಂಬಲದಿಂದ ಈ ಅಕಾಡೆಮಿ ತೆರೆದೆ’’ ಎಂದು ಅವರು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News