ಇಸ್ಲಾಂ ಕುರಿತ ತಪ್ಪುಕಲ್ಪನೆಗಳು: ತಿಳಿಗೊಳಿಸುವ ಪ್ರಯತ್ನ

Update: 2017-04-11 18:52 GMT

‘ತಪ್ಪು ಕಲ್ಪನೆಗಳು- ಇಸ್ಲಾಂ: ತಪ್ಪು ತಿಳುವಳಿಕೆಯ ಪರದೆಯನ್ನು ಕಿತ್ತೊಗೆಯೋಣ’ ಸದ್ಯದ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಕುರಿತಂತೆ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ನಿವಾರಿಸುವ ಉದ್ದೇಶದಿಂದ ಬರೆದ ಕೃತಿ. ಸೈಯದ್ ಹಾಮಿದ್ ಮುಹ್ಸಿನ್ ಅವರು ಈ ಕೃತಿಯನ್ನು ಬರೆದಿದ್ದು, ಮುಸ್ಲಿಮ್ ದ್ವೇಷವನ್ನು ಮುಂದಿಟ್ಟು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸುವ ನಾಯಕರು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟ ಉತ್ತರವನ್ನು ನೀಡುತ್ತದೆ. ಈ ಕೃತಿ ಉಲ್ಲೇಖಿಸಿರುವ ಬಹುತೇಕ ತಪ್ಪುಗಳನ್ನು ಕಲ್ಪನೆಗಳು ಎಂದು ಕರೆಯುವುದಕ್ಕಿಂತ, ರಾಜಕೀಯ ಕಾರಣಗಳಿಗಾಗಿ ಕೆಲವು ಹಿತಾಸಕ್ತಿಗಳು ಹರಡಿರುವ ವದಂತಿಗಳು ಮತ್ತು ಸುಳ್ಳುಗಳು ಎಂದು ಕರೆಯಬಹುದು. ಆದುದರಿಂದ ಈ ಪುಸ್ತಕ ಸುಳ್ಳುಗಳನ್ನು ಹರಡುವ ಉದ್ವಿಗ್ನಕಾರಿ ಶಕ್ತಿಗಳನ್ನು ಎಷ್ಟರಮಟ್ಟಿಗೆ ಎಚ್ಚರಿಸಬಹುದು ಎನ್ನುವುದರ ಬಗ್ಗೆ ಅನುಮಾನವಿದೆ. ಆದರೆ ಈ ವದಂತಿಗಳನ್ನು ಹರಡುವ ಮಂದಿಗಳ ಬಲೆಗೆ ಬೀಳುವ ಅಮಾಯಕರ ಆತಂಕ, ಗೊಂದಲಗಳನ್ನು ನಿವಾರಿಸುವಲ್ಲಿ ಈ ಕೃತಿ ಯಶಸ್ವಿಯಾಗುತ್ತದೆ. ವಿಶೇಷವೆಂದರೆ, ಮುಸ್ಲಿಮರ ಕುರಿತಂತೆ ಇತರ ಧರ್ಮೀಯರಲ್ಲಿರುವ ತಪ್ಪುಕಲ್ಪನೆಗಳನ್ನಷ್ಟೇ ಅಲ್ಲ, ಸ್ವತಃ ಮುಸ್ಲಿಮರೂ ಇಸ್ಲಾಂನ ಕುರಿತಂತೆ ನಂಬಿರುವ ಗೊಂದಲಗಳನ್ನೂ ತಿಳಿಗೊಳಿಸಲು ಈ ಕೃತಿ ಯತ್ನಿಸುತ್ತದೆ. ಪೂರ್ವಾಗ್ರಹ ಪೀಡಿತ ಇತಿಹಾಸ, ಬಹುಪತ್ನಿತ್ವ, 786 ಅಂಕಿ, ಬಾಲಚಂದ್ರ ನಕ್ಷತ್ರ ಲಾಂಛನ, ಲವ್ ಜಿಹಾದ್, ಹಸಿರು ಬಣ್ಣ,, ತಲಾಖ್, ಖುಲಾ, ಫತ್ವಾ, ಕಾಫಿರ್, ಹಲಾಲ್ ಹರಾಮ್, ಮದ್ರಸಾ ಮತ್ತು ಮಕ್ತಬಾ, ಅದಾನ್, ಜಿಹಾದ್, ಭಯೋತ್ಪಾದನೆ, ಜನಸಂಖ್ಯಾ ಭೂತ, ಮುಸ್ಲಿಮರ ಓಲೈಕೆ, ವೈಯಕ್ತಿಕ ಕಾನೂನು ಇವೆಲ್ಲವನ್ನು ಹೇಗೆ ಭೂತಕನ್ನಡಿಯಲ್ಲಿ ತೋರಿಸಲಾಗುತ್ತಿದೆ ಮತ್ತು ವಾಸ್ತವದಲ್ಲಿ ಅದರ ಹಿನ್ನೆಲೆಗಳೇನು ಎನ್ನುವುದನ್ನು ತಿಳಿ ಹೇಳುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಅನೇಕ ಸಂದರ್ಭದಲ್ಲಿ ಹಸಿರು ಬಣ್ಣ, 786, ಅರ್ಧಚಂದ್ರ ಇವೆಲ್ಲವನ್ನೂ ಮುಸ್ಲಿಮ್ ಧರ್ಮೀಯರೇ ತಪ್ಪು ತಿಳಿದುಕೊಂಡದ್ದಿದೆ. ಹಾಗೆಯೇ ಜನಸಂಖ್ಯೆಯ ಕುರಿತಂತೆ, ಭಯೋತ್ಪಾದಕರ ಬಗ್ಗೆ ಕೆಲವು ಹಿತಾಸಕ್ತಿಗಳು ಮಂಡಿಸುವ ಅಂಕಿಸಂಖ್ಯೆಗಳನ್ನು ಮುಸ್ಲಿಮರೇ ನಂಬಿ ಕೀಳರಿಮೆಯಿಂದ ನರಳುವುದಿದೆ. ಈ ಕೃತಿ ಏಕಕಾಲದಲ್ಲಿ ಮುಸ್ಲಿಮರಿಗೂ, ಮುಸ್ಲಿಮೇತರರಿಗೂ ಕೆಲವು ಸಿದ್ಧ ಮಾದರಿಯ ಜನಪ್ರಿಯ ಸುಳ್ಳುಗಳ ಹಿಂದಿರುವ ರಾಜಕೀಯವನ್ನು ಸರಳವಾಗಿ ಪರಿಚಯಿಸುವ ಪ್ರಯತ್ನ ಮಾಡುತ್ತದೆ.

ಸಲಾಂ ಸೆಂಟರ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 250 ರೂಪಾಯಿ. ಆಸಕ್ತರು 99011 29956 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News