ಮರಾಠಿ ವೈಚಾರಿಕ ಲೇಖನಗಳು

Update: 2017-05-08 18:25 GMT

 ಭಾರತದ ಚರಿತ್ರೆಯಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಆದ ವೈಚಾರಿಕ ಪಲ್ಲಟಗಳ ಕೇಂದ್ರ ಬಿಂದುಗಳು ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಇದ್ದವು ಎಂದು ಭಾವಿಸಲಾಗಿದೆ. ಇದು ಬಹುಮಟ್ಟಿಗೆ ಒಪ್ಪಿತವಾದುದು ಕೂಡ. ವಿಪರ್ಯಾಸವೆಂದರೆ, ಇಂದು ಉತ್ತರ ಭಾರತವು ದಕ್ಷಿಣ ಭಾರತದ ಮೇಲೆ ಹೇರುತ್ತಿರುವ ರೋಚಕಮಯವಾದ ಹಿಂದುತ್ವ ಸಂಸ್ಕೃತಿಯ ಮೂಲ ಬೇರುಗಳೂ ಇದೇ ಎರಡು ರಾಜ್ಯಗಳಲ್ಲೇ ಇಳಿದಿವೆ. ಪಶ್ಚಿಮಬಂಗಾಳದ ಜನಪ್ರಿಯ ಕಾದಂಬರಿಗಳು, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ರಾಷ್ಟ್ರೀಯ ಚಿಂತನೆಗಳೇ ಬೇರೆ ಬೇರೆ ರೂಪಾಂತರಗಳ ಮೂಲಕ, ಇಂದು ಹಿಂದುತ್ವ ರಾಷ್ಟ್ರೀಯತೆಯಾಗಿ ನಮ್ಮ ಮುಂದೆ ನಿಂತಿದೆ. ಇಂತಹ ಸಂದರ್ಭದಲ್ಲಿ, ಈ ಜನಪ್ರಿಯ ಆದರ್ಶಗಳಿಗೆ ಪ್ರತಿಯಾಗಿ ಇದೇ ನೆಲದಲ್ಲಿ ಹುಟ್ಟಿಕೊಂಡ ವೈಚಾರಿಕ ಶಕ್ತಿಗಳನ್ನು ಅರಿಯುವುದು, ಆ ಅಸದ ಮೂಲಕವೇ ಹಿಂದುತ್ವ ರಾಷ್ಟ್ರೀಯತೆಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಕಾರ ಹೊರತಂದಿರುವ ಮರಾಠಿ ವೈಚಾರಿಕ ಲೇಖನಗಳ ಈ ಸಂಗ್ರಹ, ಒಂದು ಕೈಮರದಂತಿದೆ. ಚಂದ್ರಕಾಂತ ಪೋಕಳೆ ಅವರು ಈ ಲೇಖನಗಳನ್ನು ಕನ್ನಡಕ್ಕಿಳಿಸಿದ್ದಾರೆ. ಮೊದಲ ಲೇಖನ ಸೀತಾರಾಮ ರಾಮಚಂದ್ರ ಗಾಯಕವಾಡ ಅವರದು. ಪೇಶ್ವೆಯ ಕಟ್ಟಕಡೆಯ ತಲೆಮಾರಿನ ದುರಂತವನ್ನು ಅವರು ಈ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೋರೆಗಾಂವ್ ಯುದ್ಧದ ಬಳಿಕದ ಬೆಳವಣಿಗೆಗಳು ಇದರಲ್ಲಿವೆ. ಲೋಕಹಿತವಾದಿ ಅವರ ‘ಸರಕಾರ ಮತ್ತು ಪ್ರಜಾಪ್ರಭುತ್ವ’ ಲೇಖನ ದಲ್ಲಿ ಸರಕಾರ ಮತ್ತು ಜನಸತ್ತೆಯ ನಡುವಿನ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನ ನಡೆಯುತ್ತದೆ. ಸರಕಾರ ಕ್ಷೀಣಿಸಿದಷ್ಟೂ, ಜನಸತ್ತೆ ವೃದ್ಧಿಸಿದಷ್ಟೂ ಒಳ್ಳೆಯದು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಅನಾಗರಿಕ ದೇಶದಲ್ಲಿ ಸರಕಾರವೇ ಯಜಮಾನನಾಗಿರುತ್ತದೆ ಎಂಬ ಲೇಖಕರ ಅಭಿಪ್ರಾಯ ಇಂದಿನ ದಿನಗಳಿಗೆ ಕನ್ನಡಿ ಹಿಡಿಯುತ್ತದೆ. ಜೋತಿರಾವ್ ಗೋವಿಂದರಾವ್ ುಲೆ ಅವರ ‘ಗುಲಾಮಗಿರಿಯ ಪ್ರಸ್ತಾವನೆ’ಯಲ್ಲಿ ಆಂಗ್ಲರ ಆಗಮನ ಈ ದೇಶದಲ್ಲಿ ಹೇಗೆ ಶೂದ್ರರು ಮತ್ತು ದಲಿತರಿಗೆ ಸ್ವಾತಂತ್ರವನ್ನು ನೀಡಿತು ಮತ್ತು ಬ್ರಾಹ್ಮಣರು ಮತ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯ ಆಯಕಟ್ಟಿನಲ್ಲಿ ಜಾಗಪಡೆದುದರಿಂದ ಶೂದ್ರರು ಹೇಗೆ ಬ್ರಾಹ್ಮಣರ ಗ್ರಂಥಗಳ ಮೂಲಕ ಮಾನಸಿಕ ದಾಸರಾಗಬೇಕಾಯಿತು ಎಂಬ ದುರಂತದ ಕುರಿತಂತೆ ವಿವರಗಳಿವೆ. ಬಾಲಗಂಗಾಧರ ತಿಲಕ ಅವರು ‘ಯಾವುದು ಮೊದಲು ರಾಜಕೀಯವೇ? ಸಾಮಾಜಿಕವೇ?’ ಲೇಖನದಲ್ಲಿ ಗೃಹ ಸ್ಥಿತಿಯನ್ನು ರಾಜಕೀಯ ಸ್ಥಿತಿಯೊಂದಿಗೆ ಸಾರ್ವಜನಿಕವಾಗಿ ಸಾರ್ವಕಾಲಿಕವಾಗಿ ಹೋಲಿಸುವುದನ್ನು ನಿರಾಕರಿಸುತ್ತಾರೆ. ಗೋಪಾಲಗಣೇಶ ಅಗರಕರ, ಪಂಡಿತಾ ರಮಾಬಾಯಿ, ತಾರಾಬಾಯಿ ಶಿಂಧೆೆ, ಗೋಪಾಲ ಬಾಬಾ ವಲಂಗಕರ, ವಿ. ಕ ರಾಜವಾಡೆ ಈ ಎಲ್ಲರ ಲೇಖನಗಳು ಸ್ವಾತಂತ್ರ ಪೂರ್ವದ ಭಾರತೀಯ ಕಾಲಘಟ್ಟ ಮತ್ತು ವೈಚಾರಿಕ ಸಂಘರ್ಷಗಳನ್ನು ತಿಳಿಸುತ್ತವೆ.
97 ಪುಟಗಳ ಕೃತಿಯ ಮುಖಬೆಲೆ 60 ರೂ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News