ಮೂಡಿಗೆರೆ: ಸಂಘಪರಿವಾರದ ಬೆದರಿಕೆಗೆ ವಿದ್ಯಾರ್ಥಿನಿ ಆತ್ಮಹತ್ಯೆ?

Update: 2018-01-07 16:42 GMT

ಮೂಡಿಗೆರೆ, ಜ.7: ಮೂಡಿಗೆರೆ ಪಟ್ಟಣದ ಛತ್ರಮೈದಾನ ಬಡಾವಣೆಯಲ್ಲಿ ಧನ್ಯಾ(20) ಎಂಬ ಪದವಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ವರದಿಯಾಗಿದೆ.

ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಘ ಪರಿವಾರದ ಯುವಕನೋರ್ವನ ಪ್ರಚೋದನೆ ಮತ್ತು ಮಾನಹಾನಿಕರ ಪ್ರಯತ್ನ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ಯುವತಿ ಮೂಡಿಗೆರೆಯ ಡಿ.ಎಸ್. ಬಿಳಿಗೌಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದಳು ಎನ್ನಲಾಗಿದೆ. ಬೇರೆ ಹುಡುಗನ ಜೊತೆ ಸ್ನೇಹ ಮಾಡಿಕೊಂಡಿದ್ದನ್ನು ಪ್ರಶ್ನಿಸಿ ಸಂಘಪರಿವಾರದ ಯುವಕನೋರ್ವ ಈಕೆಯನ್ನು ವಾಟ್ಸ್‌ಆ್ಯಪ್ ಮೂಲಕ ಮೆಸೇಜ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಇವರಿಬ್ಬರ ನಡುವೆ ವಾಟ್ಸ್‌ಆ್ಯಪ್‌ನಲ್ಲಿ ನಡೆಸಿದ್ದರೆನ್ನಲಾದ ಸಂಭಾಷಣೆಯ ವಾಟ್ಸ್‌ಆ್ಯಪ್‌ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಈ ವಾಟ್ಸ್‌ಆ್ಯಪ್ ಚಿತ್ರಗಳು ನಕಲಿಯೋ? ಅಸಲಿಯೋ? ಎಂಬುದು ಪೊಲಿಸ್ ತನಿಖೆಯಿಂದ ತಿಳಿದು ಬರಬೇಕಿದೆ.

“ಆ ಯುವಕನ ಗೆಳೆತನ ಬಯಸಿದ್ದರಲ್ಲಿ ತಪ್ಪೇನು? ಅವರು ಒಳ್ಳೆಯವರು” ಎಂದು ತುಳು ಭಾಷೆಯಲ್ಲಿ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ವಿದ್ಯಾರ್ಥಿನಿಯು ಸಮರ್ಥನೆ ಮಾಡಿಕೊಂಡಿದ್ದಳು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆ ಯುವಕ, “ನಿಮ್ಮ ಅಪ್ಪನಿಗೆ ಮತ್ತು ಬಜರಂಗದಳಕ್ಕೆ ಹೇಳುತ್ತೇನೆ” ಎಂದು ಹುಡುಗಿಗೆ ಬೆದರಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ವಿದ್ಯಾರ್ಥಿನಿ ಧನ್ಯಾಳೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿರುವುದನ್ನು ಇತರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ವೈರಲ್ ಮಾಡುವ ಮೂಲಕ ಮೂಡಿಗೆರೆಯ ಕೆಲವು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದಾನೆ. ವಾಟ್ಸ್‌ಆ್ಯಪ್ ಸ್ಕ್ರೀನ್‌ಶಾಟ್ ಸಹಿತ ಆಕೆಯ ಮತ್ತು ಆ ಯುವಕನ ಭಾವಚಿತ್ರವನ್ನು ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ಹಾಕಿ ಮಾನಹಾನಿ ಮಾಡಿರುವ ಆರೋಪ ಕೇಳಿ ಬಂದಿದೆ.

 ವಿಷಯ ತಿಳಿದ ಮೂಡಿಗೆರೆಯ ಸಂಘಪರಿವಾರದ ಕೆಲ ಕಾರ್ಯಕರ್ತರು ಜನವರಿ 5ರಂದು ಮೂಡಿಗೆರೆ ಟೌನ್ ಛತ್ರಮೈದಾನದಲ್ಲಿನ ಹುಡುಗಿಯ ಮನೆಗೆ ಹೋಗಿ ಆಕೆಯ ತಂದೆ ಯಾದವ ಮತ್ತು ತಾಯಿ ಸರಸ್ವತಿ ಅವರಿಗೆ ವಿಷಯ ತಿಳಿಸಿ ಹುಡುಗಿಗೆ ಎಚ್ಚರಿಕೆ ನೀಡಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದ್ದು, ಇದರಿಂದ ಮನನೊಂದ ಹುಡುಗಿ ಜ.6ರಂದು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಆದರೆ ವಿದ್ಯಾರ್ಥಿನಿ ಬರೆದಿಟ್ಟ ಡೆತ್‌ನೋಟ್ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು, ಈ ಕುರಿತು ಪೊಲೀಸರು ಗಂಭೀರ ತನಿಖೆ ಕೈಗೊಳ್ಳುವ ಮೂಲಕ ಆತ್ಮಹತ್ಯೆಯ ನೈಜ ಸತ್ಯವನ್ನು ಬಿಚ್ಚಿಟ್ಟು, ಅಪರಾಧಿಗೆ ಶಿಕ್ಷೆ ಕೊಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸುವ ಮೂಲಕ ಸಂಘಪರಿವಾರದ ಕಾರ್ಯಕರ್ತರು ಗೂಂಡಾವರ್ತನೆ ತೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News