ಸೇತುವೆಯಿಂದ ನದಿಗೆ ಬಿದ್ದ ಬಸ್: 10 ಮಂದಿ ಮೃತಪಟ್ಟಿರುವ ಶಂಕೆ

Update: 2018-01-29 08:09 GMT

ಕೊಲ್ಕತ್ತಾ, ಜ.29: ಬಸ್ಸೊಂದು ನದಿಗೆ ಬಿದ್ದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ದೌಲತಾಬಾದ್ ಗ್ರಾಮದಲ್ಲಿ ನಡೆದಿದ್ದು, 10 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನಡಿಯಾ ಜಿಲ್ಲೆಯಿಂದ ಬೆರ್ಹಾಂಪೋರ್ ಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಬಾಲಿ ಸೇತುವೆಯಿಂದ ಅಜಯ್ ನದಿಗೆ ಬಿದ್ದಿದೆ. ಬಸ್ಸಿನಲ್ಲಿ ಸುಮಾರು 42 ಪ್ರಯಾಣಿಕರಿದ್ದರು ಎನ್ನಲಾಗಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಕ್ಷಣಾ ಪಡೆ ಹಾಗು ಪೊಲೀಸರು ತಡವಾಗಿ ಆಗಮಿಸಿದ್ದರಿಂದ ಕೋಪಗೊಂಡ ಸ್ಥಳೀಯರು ಬಸ್ ಗಳು, ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ನಾಲ್ಕು ಸುತ್ತು ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ ಉದ್ರಿಕ್ತ ಜನರು ಪೊಲೀಸರ ಮೇಲೆ ಕಲ್ಲೆಸೆದು ವಾಹನಗಳಿಗೆ ಬೆಂಕಿ ಹಚ್ಚಿದರು.

ಈವರೆಗೆ ಕೇವಲ 7 ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News