ಮಂಡ್ಯ: ಜಾತ್ಯತೀತ ಜನತಾದಳದ ವತಿಯಿಂದ ಕುಮಾರಪರ್ವ ಬೈಕ್ ರ‍್ಯಾಲಿ

Update: 2018-02-09 18:07 GMT

ಮಂಡ್ಯ, ಫೆ.9: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ಜಾತ್ಯತೀತ ಜನತಾದಳದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕುಮಾರ ಪರ್ವದ ಅಂಗವಾಗಿ ಮೇಲುಕೋಟೆಯಿಂದ ಪಾಂಡವಪುರದವರೆಗೆ ಬೈಕ್ ರ್ಯಾಲಿ ನಡೆಯಿತು.

ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 3.30ಕ್ಕೆ ಪೂಜೆ ಸಲ್ಲಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಾಂಡವಪರಕ್ಕೆ ಮೆರವಣಿಗೆ ಹೊರಟರು. ಈ ವೇಳೆ ಸಂಸದ ಸಿ.ಎಸ್.ಪುಟ್ಟರಾಜು, ಜೆಡಿಎಸ್ ರಾಷ್ಟ್ರೀಯ ಮುಖಂಡ ಫಾರೂಕ್ ಜೊತೆಗಿದ್ದರು.

ಮೇಲುಕೋಟೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಬೈಕ್ ರ್ಯಾಲಿ ನಡೆಸಿದರು. ಕದಲಗೆರೆ, ಜಕ್ಕನಹಳ್ಳಿ, ನ್ಯಾಮನಹಳ್ಳಿ, ಅಮೃತ್ತಿ, ಮಾಣಿಕ್ಯನಹಳ್ಳಿ, ಬೆಳ್ಳಾಳೆ, ನೀಲನಹಳ್ಳಿ ಗೇಟ್, ಮಹದೇಶ್ವರಪುರ, ಟಿ.ಎಸ್.ಛತ್ರ, ಬನಘಟ್ಟ ಮೂಲಕ ಪಾಂಡವಪುರಕ್ಕೆ ಆಗಮಿಸಿದರು.

ಅಭೂತಪೂರ್ವ ಪ್ರತಿಕ್ರಿಯೆ
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ತರುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಕುಮಾರಪರ್ವ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ನಾಡಿನ ಆರೂವರೆ ಕೋಟಿ ಜನರಿಗೆ ಒಳ್ಳೆಯದಾಗಲಿ. ಜನರ ಕಷ್ಟ ಪರಿಹರಿಸುವ ಶಕ್ತಿಕೊಡಲಿ ಎಂಬ ಉದ್ದೇಶದಿಂದ ಮೇಲುಕೋಟೆ ಶ್ರೀಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ವೈಯಕ್ತಿಕವಾಗಿ ನನ್ನ ಯಾವುದೇ ಬೇಡಿಕೆಗಾಗಿ ಪೂಜೆ ಸಲ್ಲಿಸಿಲ್ಲ. ರಾಜ್ಯದ ಆರೂವರೆ ಕೋಟಿ ಜನರ ಹೃದಯದಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎನ್ನುವ ಆಸೆ ಇದೆ. ಹಾಗಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News