ಯುವತಿಯ ಸಾಮೂಹಿಕ ಅತ್ಯಾಚಾರ
ಕೊಲ್ಕತ್ತಾ, ಫೆ.20: 19ರ ಹರೆಯದ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದ ಹೊರವಲಯದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ನಡೆಸಿದ ಆರೋಪಿಗಳು ಯುವತಿಯ ದೇಹದ ಖಾಸಗಿ ಭಾಗಕ್ಕೆ ಲೋಹದ ವಸ್ತುವನ್ನು ತುರುಕಿಸಿ ಪೈಶಾಚಿಕತೆ ಮೆರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯು ಸುಮಾರು 18 ಗಂಟೆಗಳ ಕಾಲ ದಕ್ಷಿಣ ದಿನಜ್ಪುರದ ಗ್ರಾಮದಲ್ಲಿರುವ ಸೇತುವೆಯ ಅಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 18ರಂದು ಅದೇ ದಾರಿಯಾಗಿ ಸಾಗುತ್ತಿದ್ದ ಧಾಮು ಸೊರೆನ್ ಎಂಬವರು ಸೇತುವೆಯ ಅಡಿಯಲ್ಲಿ ಯುವತಿ ಬಿದ್ದಿರುವುದನ್ನು ಗಮನಿಸಿದ್ದರು. ಆಕೆಯ ಖಾಸಗಿ ಭಾಗದಿಂದ ಕರುಳು ಹೊರಬಂದಿರುವುದನ್ನು ಗಮನಿಸಿದ ಅವರು ಕೂಡಲೇ ಆಕೆಯ ಮುಖಕ್ಕೆ ನೀರನ್ನು ಚಿಮುಕಿಸಿ ಆಕೆಯನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ದೆಹಬಂದ್ ಗ್ರಾಮದ ನಿವಾಸಿಯಾಗಿದ್ದು ಫೆಬ್ರವರಿ 17ರಂದು ಶಿವರಾತ್ರಿಯ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ಸಮಯದಲ್ಲಿ ತನ್ನನ್ನು ಅಪಹರಿಸಲಾಗಿತ್ತು. ಅದೇ ಗ್ರಾಮದ ನಿವಾಸಿಯಾಗಿರುವ ರಾಮ ಪ್ರಬೇಶ್ ಶರ್ಮಾ ಇತರರೊಂದಿಗೆ ಸೇರಿ ತನ್ನನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಸಂತ್ರಸ್ತ ಯುವತಿ ತಿಳಿಸಿರುವುದಾಗಿ ಸೊರೆನ್ ತಿಳಿಸಿದ್ದಾರೆ. ಅತ್ಯಾಚಾರ ನಡೆಸಿದ ನಂತರ ಆಕೆಯ ಖಾಸಗಿ ಭಾಗಕ್ಕೆ ಲೋಹದ ವಸ್ತುವನ್ನು ತುರುಕಿಸಿದ ಪರಿಣಾಮವಾಗಿ ಕರುಳು ಹೊರಬಂದಿರಬೇಕು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಯುವತಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಜ್ಞ ವೈದ್ಯರ ತಂಡ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಹೋರಾಟಗಾರರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.