​ಗೋರಕ್ಷಕರಿಂದ ಹತ್ಯೆ, ಪತ್ರಕರ್ತರಿಗೆ ಬೆದರಿಕೆ: ಅಮ್ನೆಸ್ಟಿ ವರದಿಯಲ್ಲಿ ವ್ಯಾಪಕ ಖಂಡನೆ

Update: 2018-02-23 03:51 GMT

ಹೊಸದಿಲ್ಲಿ, ಫೆ. 23: ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಅನಗತ್ಯ ಭೀತಿ ಹುಟ್ಟಿಸುವ ಪ್ರವೃತ್ತಿ ಹೆಚ್ಚಿದ್ದು, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಭಾರತೀಯ ಅಧಿಕಾರಿಗಳು ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಟುವಾಗಿ ಟೀಕಿಸಿದೆ.

ದಕ್ಷಿಣ ಏಷ್ಯಾದಲ್ಲಿ ಮಾನವಹಕ್ಕುಗಳ ಸ್ಥಿತಿಗತಿ ತೀರಾ ಶೋಚನೀಯವಾಗಿದೆ ಎಂದು ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ಗೋಮಾಂಸ ಭಕ್ಷಣೆ ನೆಪದಲ್ಲಿ ಗೋರಕ್ಷಕರಿಂದ ಹಲ್ಲೆ ಮತ್ತು ಹತ್ಯೆ ಘಟನೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ.

"ಕನಿಷ್ಠ 10 ಮಂದಿ ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ ಹಾಗೂ ಹಲವು ಮಂದಿಯ ಮೇಲೆ ಗೋರಕ್ಷಕ ಗುಂಪುಗಳು ಹಲ್ಲೆ ನಡೆಸಿವೆ. ಇವರು ಆಡಳಿತಾರೂಢ ಬಿಜೆಪಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವಂತೆ ಕಾಣುತ್ತಿದೆ" ಎಂದು ವರದಿ ಸ್ಪಷ್ಟಪಡಿಸಿದೆ.

ಪತ್ರಕರ್ತರಿಗೆ ಬೆದರಿಕೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕೂಡಾ ವರದಿ ಉಲ್ಲೇಖಿಸಿದೆ. ಹಲವು ಮಂದಿ ಪತ್ರಕರ್ತರು ಹಾಗೂ ಮಾನವಹಕ್ಕು ರಕ್ಷಕರು ಜೀವ ಕಳೆದುಕೊಂಡಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಬಂದೊದಗಿದೆ. ಹಿಂದೂ ರಾಷ್ಟ್ರೀಯವಾದ ಮತ್ತು ಜಾತಿಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನಲ್ಲಿ ಮನೆಯ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹಲವು ಪತ್ರಕರ್ತರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.

"ಪ್ರತಿಗಾಮಿ ಕಾನೂನುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಲು ಬಳಸಲಾಗುತ್ತಿದೆ. ರಾಜ್ಯ ಸರ್ಕಾರಗಳು ಪುಸ್ತಕಗಳನ್ನು ನಿಷೇಧಿಸುತ್ತಿದ್ದು, ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಚಿತ್ರಗಳ ಬಿಡುಗಡೆಗೆ ವಿನಾಕಾರಣ ಅವಕಾಶ ನಿರಾಕರಿಸುತ್ತಿದೆ" ಎಂದು  ಆರೋಪ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News